ADVERTISEMENT

ದರ್ಶನ್ ಪ್ರಕರಣ: ರೇಣುಕಸ್ವಾಮಿ ತಂದೆ, ತಾಯಿ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 16:14 IST
Last Updated 17 ಡಿಸೆಂಬರ್ 2025, 16:14 IST
ರೇಣುಕಸ್ವಾಮಿ 
ರೇಣುಕಸ್ವಾಮಿ    

ಬೆಂಗಳೂರು: ಕೊಲೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಅವರ ತಂದೆ ಕಾಶೀನಾಥಯ್ಯ ಶಿವನಗೌಡರ್‌(ಸಾಕ್ಷಿ –7) ಹಾಗೂ ತಾಯಿ ರತ್ನಪ್ರಭಾ (ಸಾಕ್ಷಿ–8)ಅವರು 57ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಹಾಜರಾಗಿ ಪ್ರಕರಣದ ಸಂಬಂಧ ತಮ್ಮ ಹೇಳಿಕೆ ದಾಖಲಿಸಿದರು.

ನಟ ದರ್ಶನ್, ಪವಿತ್ರಾಗೌಡ, ದರ್ಶನ್‌ ಅವರ ವ್ಯವಸ್ಥಾಪಕ ಆರ್.ನಾಗರಾಜ್‌, ಕಾರು ಚಾಲಕ ಲಕ್ಷ್ಮಣ್‌, ಉದ್ಯಮಿ ಪ್ರದೂಷ್ ರಾವ್‌ ಹಾಗೂ ಚಿತ್ರದುರ್ಗದ ಆಟೊ ಚಾಲಕರಾದ ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ವಿಡಿಯೊ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ಉಳಿದ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.

ನ್ಯಾಯಾಧೀಶರ ಎದುರು ರೇಣುಕಸ್ವಾಮಿ ತಂದೆ –ತಾಯಿ ಒಂದು ತಾಸು ಹೇಳಿಕೆ ದಾಖಲಿಸಿದರು. ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರು ಹಾಗೂ ಸಾಕ್ಷಿದಾರರನ್ನು ಹೊರತು ಪಡಿಸಿ ಉಳಿದವರನ್ನು ವಿಚಾರಣೆ ನಡೆದ ಸ್ಥಳದಿಂದ ಹೊರಕ್ಕೆ ಕಳುಹಿಸಲಾಗಿತ್ತು.

ADVERTISEMENT

‘2024ರ ಜೂನ್‌ 8ರಂದು ಪುತ್ರ ರೇಣುಕಸ್ವಾಮಿ ಬೆಳಿಗ್ಗೆ ಫಾರ್ಮಸಿ ಕೆಲಸಕ್ಕೆ ಹೋಗಿದ್ದ. ಮಧ್ಯಾಹ್ನ ಕರೆ ಮಾಡಿ ಸ್ನೇಹಿತರ ಜತೆ ಊಟಕ್ಕೆ ಹೋಗುತ್ತೇನೆ, ಬರುವುದು ತಡವಾಗುತ್ತದೆ ಎಂಬುದಾಗಿ ಹೇಳಿದ್ದ. ಸಂಜೆ 7 ಗಂಟೆಯಾದರೂ ಮನೆಗೆ ಬಂದಿರಲಿಲ್ಲ. ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ಡ್ ಆಫ್ ಆಗಿತ್ತು. ಎಲ್ಲೆಡೆ ಹುಡುಕಾಟ ನಡೆಸಿದ್ದೆವು. ಜೂನ್ 10ರಂದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕರೆ ಮಾಡಿ, ನಿಮ್ಮ ಮಗನ ವಿಚಾರವಾಗಿ ಬೆಂಗಳೂರಿಗೆ ಬನ್ನಿ ಎಂದು ಸೂಚಿಸಿದ್ದರು. ಬಂದು ನೋಡಿದಾಗ ಮಗ ಮೃತಪಟ್ಟಿರುವುದು ಗೊತ್ತಾಗಿತ್ತು. ಮೃತದೇಹದ ಮೇಲೆ ಸುಟ್ಟಗಾಯವಿತ್ತು’ ಎಂಬುದಾಗಿ ಕಾಶೀನಾಥಯ್ಯ ಹಾಗೂ ರತ್ನಪ್ರಭಾ ಅವರು ಹೇಳಿಕೆ ನೀಡಿದ್ದಾರೆ.

ಅದಾದ ಮೇಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಪರ ವಕೀಲ ಬಾಲನ್‌ ಅವರು ರತ್ನಪ್ರಭಾ ಅವರನ್ನು ಪಾಟೀಸವಾಲಿಗೆ ಒಳಪಡಿಸಿದರು.

‘ರೇಣುಕಸ್ವಾಮಿ ಅವರು 2024ರ ಜೂನ್‌ 8ರಂದು ನಾಪತ್ತೆ ಆಗಿದ್ದಾರೆ’ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ. ನಾಪತ್ತೆ ಆಗುವುದಕ್ಕೂ ಮುನ್ನ ಪುತ್ರ ನಿಮ್ಮನ್ನು ಸಂಪರ್ಕಿಸಿದ್ದರೆ ಎಂದು ಬಾಲನ್ ಪ್ರಶ್ನಿಸಿದರು. ಆಗ ರತ್ನಪ್ರಭಾ ಅವರು ಪ್ರತಿಕ್ರಿಯಿಸಿ, ‘ಹೌದು ಊಟಕ್ಕೆ ಬರುವುದಿಲ್ಲ ಎಂಬುದಾಗಿ ಹೇಳಿ ಹೋಗಿದ್ದ’ ಎಂದರು.

ಚಿತ್ರದುರ್ಗದ ಬಾಲಾಜಿ ಬಾರ್‌ಗೆ ರೇಣುಕಸ್ವಾಮಿ ಅವರು ಆಗಾಗ್ಗೆ ಹೋಗುತ್ತಿದ್ದರು ಅಲ್ಲವೇ ಎಂದು ಬಾಲನ್‌ ಪ್ರಶ್ನಿಸಿದರು. ‘ಸ್ನೇಹಿತರೊಂದಿಗೆ ಪುತ್ರ ಬಾಲಾಜಿ ಬಾರ್‌ಗೆ ಊಟಕ್ಕೆ ಹೋಗಿಲ್ಲ’ ಎಂದು ರತ್ನಪ್ರಭಾ ಅವರು ಪ್ರತಿಕ್ರಿಯಿಸಿದರು.

‘ಜೂನ್ 8ರಂದು ಸಂಜೆ 5ರಿಂದ 7ರ ವರೆಗೂ ಚಿತ್ರದುರ್ಗದಲ್ಲೇ ರೇಣುಕಸ್ವಾಮಿ ಇದ್ದರು ಎನ್ನುವ ಮಾಹಿತಿಯಿದೆ. ನಂತರ, ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಹೋಗಿದ್ದು ನಿಮಗೆ ಗೊತ್ತಿತ್ತಾ? ನಿಮ್ಮ ಪುತ್ರ ಎಲ್ಲಿ ಹೋಗಿದ್ದರು ಎಂಬುದು ನಿಮಗೆ ಗೊತ್ತಿತ್ತೇ? ನೀವು ಏಕೆ ದೂರು ಕೊಟ್ಟಿಲ್ಲ’ ಎಂದು ಬಾಲನ್‌ ಪ್ರಶ್ನಿಸಿದರು.

‘ಮಧ್ಯಾಹ್ನ 2 ಗಂಟೆಗೆ ಕರೆ ಮಾಡಿದ್ದ. ನಂತರ, 7 ಗಂಟೆಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಇತ್ತು. ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಹೋಗಿದ್ದರೆಂಬುದು ಸರಿಯಲ್ಲ. ಮಗ ಎಲ್ಲಿ ಹೋಗಿದ್ದ ಎಂಬುದು ಗೊತ್ತಿರಲಿಲ್ಲ. ಶನಿವಾರ, ಭಾನುವಾರ ಕೆಲಸಕ್ಕೆ ಹೋಗುವಾಗ ಯೂನಿಫಾರ್ಮ್ ಹಾಕುತ್ತಿರಲಿಲ್ಲ’ ಎಂದು ತಾಯಿ ಉತ್ತರಿಸಿದ್ದಾರೆ.

ದರ್ಶನ್‌ 

ವಿಚಾರಣೆ ಮುಂದುವರಿಕೆ... ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರ (ಡಿ.18) ಮಧ್ಯಾಹ್ನ 12.30ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಸಾಕ್ಷಿದಾರರನ್ನು ದರ್ಶನ್ ಪರ ವಕೀಲರು ಪಾಟೀಸವಾಲಿಗೆ ಒಳಪಡಿಸಲಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.