ADVERTISEMENT

ದಾಸನಪುರ ಎಪಿಎಂಸಿ ವರ್ತಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 22:15 IST
Last Updated 4 ಡಿಸೆಂಬರ್ 2020, 22:15 IST
ದಾಸನಪುರ ಎ.ಪಿ.ಎಂ.ಸಿ. ವರ್ತಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಶಿವರಾಮರೆಡ್ಡಿ, ಕೆ.ಪಿ.ಜೈ ಕುಮಾರ್, ಸಂಘದ ಸದಸ್ಯರಾದ ಜಿ.ಕೆ.ಟಿ.ಗೌಡ, ವಿ.ಲೋಕೇಶ್, ಪ್ರಸನ್ನ ಕುಮಾರ್ ಇದ್ದರು
ದಾಸನಪುರ ಎ.ಪಿ.ಎಂ.ಸಿ. ವರ್ತಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಶಿವರಾಮರೆಡ್ಡಿ, ಕೆ.ಪಿ.ಜೈ ಕುಮಾರ್, ಸಂಘದ ಸದಸ್ಯರಾದ ಜಿ.ಕೆ.ಟಿ.ಗೌಡ, ವಿ.ಲೋಕೇಶ್, ಪ್ರಸನ್ನ ಕುಮಾರ್ ಇದ್ದರು   

ಹೆಸರಘಟ್ಟ: ಮಳಿಗೆಗಳ ಬಾಡಿಗೆ ಜೊತೆ ಜಿ.ಎಸ್.ಟಿ. ಪಾವತಿಸಿ ಎಂದು ನೋಟಿಸ್ ನೀಡಿದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ದಾಸನಪುರ ಎ.ಪಿ.ಎಂ.ಸಿ. ವರ್ತಕರ ಸಂಘವು ಶುಕ್ರವಾರ ಪ್ರತಿಭಟನೆ ನಡೆಸಿತು.

‘ಲಾಕ್‍ಡೌನ್ ಅವಧಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಬಾಡಿಗೆ ಮನ್ನಾ ಮಾಡಿಸುವುದಾಗಿ ವರ್ತಕರಿಗೆ ಭರವಸೆ ನೀಡಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ಮಾರುಕಟ್ಟೆಯಲ್ಲಿ ಮತ್ತೆ ವ್ಯಾಪಾರ ಪ್ರಾರಂಭಿಸಿದ್ದೆವು.ಆದರೆ, ಈಗ ಬಾಡಿಗೆ ಕಟ್ಟದಿದ್ದರೆ ಅಂಗಡಿಯನ್ನು ಮುಟ್ಟುಗೋಲು ಹಾಕಿ ಕೊಳ್ಳುವುದಾಗಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ’ ಎಂದು ಸಂಘದ ಅಧ್ಯಕ್ಷ ಬಿ.ಆರ್. ಶಿವರಾಮರೆಡ್ಡಿ ಹೇಳಿದರು.

‘ಯಶವಂತಪುರಕ್ಕೆ ಎ.ಪಿ.ಎಂ.ಸಿ.ಯನ್ನು ಸ್ಥಳಾಂತರ ಮಾಡಿದ ಮೇಲೆ ದಾಸನಪುರದಲ್ಲಿ ವ್ಯಾಪಾರ ಕುಸಿದಿದೆ. ಈಗ ಬಾಡಿಗೆ ಕಟ್ಟಬೇಕೆಂದರೆ ತುಂಬಾ ಕಷ್ಟವಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

ADVERTISEMENT

‘ಮಳಿಗೆಗಳನ್ನು ವಿತರಣೆ ಮಾಡುವಾಗಲೂ ಜಿಎಸ್‌ಟಿ ಕಟ್ಟಬೇಕು ಎಂದು ಹೇಳಿರಲಿಲ್ಲ. ಒಪ್ಪಂದದ ಕರಾರಿನಲ್ಲಿಯೂ ಅದು ಇಲ್ಲ. ಅಲ್ಲದೆ, ಮಳಿಗೆ ತೆಗೆದುಕೊಂಡ ಹನ್ನೊಂದು ತಿಂಗಳ ನಂತರ ಹೆಚ್ಚುವರಿಯಾಗಿ ಶೇಕಡ 20ರಷ್ಟು ಬಾಡಿಗೆಯನ್ನು ಕಟ್ಟಿ ಎನ್ನುತ್ತಿದ್ದಾರೆ. ಹೊಸ ಹೊಸ ನಿಯಮಗಳನ್ನು ತಂದು ವರ್ತಕರರ ಬದುಕನ್ನು ಹಾಳು ಮಾಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಹತ್ತು ವರ್ಷಗಳ ಹಿಂದೆ ₹300 ಕೋಟಿ ವೆಚ್ಚ ಮಾಡಿ ಇಲ್ಲಿ ಎ.ಪಿ.ಎಂ.ಸಿ.ಯನ್ನು ಸ್ಥಾಪಿಸಿತ್ತು. ಆದರೆ ಇನ್ನೂ ಮೂಲಸೌಕರ್ಯ ಕಲ್ಪಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಾಹನಗಳು ಸಂಚರಿಸಲು ರಸ್ತೆಯನ್ನೂ ವಿಸ್ತರಿಸಿಲ್ಲ. ಶಾಸಕ ಎಸ್.ಆರ್.ವಿಶ್ವನಾಥ್, ಸಚಿವರಾದ ಬಿ.ಸಿ.ಪಾಟೀಲ, ಎಸ್.ಟಿ. ಸೋಮಶೇಖರ್ ಅವರು ಎಲ್ಲ ಸೌಲಭ್ಯವನ್ನು ಒದಗಿಸಿ ಕೊಡುತ್ತೇವೆ ಎಂದು ಹೇಳಿ ಹೋದವರು ಇಲ್ಲಿಯ ತನಕ ಒಂದು ಬೇಡಿಕೆಯನ್ನೂ ಈಡೇರಿಸಿಲ್ಲ’ ಎಂದು ಸಂಘದ ಕಾರ್ಯದರ್ಶಿ ಕೆ.ಪಿ. ಜೈಕುಮಾರ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.