ರಾಜರಾಜೇಶ್ವರಿನಗರ: ಭೀಮನಕುಪ್ಪೆ ಸಮೀಪದ ದಾಸಪ್ಪನ ಕೆರೆಗೆ ತ್ಯಾಜ್ಯ ಸೇರಿ ಕಸದ ತೊಟ್ಟಿಯಾಗಿದೆ. ಗಿಡ ಗಂಟಿ, ಕಳೆಗಿಡಗಳೂ ಬೆಳೆದುಕೊಂಡಿವೆ.
ಮತ್ತೊಂದು ಕಡೆ ಕೆರೆಗೆ ರಾತ್ರೋರಾತ್ರಿ ಬಿಬಿಎಂಪಿ ವ್ಯಾಪ್ತಿಯ ಕಸ, ಕೋಳಿಯ ಅವಶೇಷ, ಕಟ್ಟಡ ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದು ಕೆರೆ ವಿನಾಶದ ಅಂಚಿನಲ್ಲಿದೆ.
ಹಲವು ವರ್ಷಗಳ ಹಿಂದೆ ಕೆರೆಯಲ್ಲಿ ನೀರು ಶೇಖರಣೆಯಾಗುತ್ತಿರಲಿಲ್ಲ. ನೀರುಗಾಲುವೆಗಳು ಮುಚ್ಚಿಹೋಗಿದ್ದವು. ಎರಡು ವರ್ಷಗಳ ಹಿಂದೆ ಯುದ್ಧಭೂಮಿ ಹೋರಾಟ ಸೇನೆ ರಾಜ್ಯ ಘಟಕದ ಅದ್ಯಕ್ಷ ಹೇಮಂತ್ರಾಜ್ ಲಕ್ಷಾಂತರ ಹಣ ಖರ್ಚು ಮಾಡಿ ದಿನವೊಂದಕ್ಕೆ 25ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳ ಕಾರ್ಯಾಚರಣೆ ನಡೆಸಿ ಕೆರೆ ಅಭಿವೃದ್ಧಿ ಮಾಡಿಸಿದ್ದರು. ಮುಚ್ಚಿ ಹೋಗಿದ್ದ ನೀರುಗಾಲುವೆಗಳನ್ನು ಕಸ ಮುಕ್ತಗೊಳಿಸಿ ನೀರು ಸರಾಗವಾಗಿ ಹರಿದು ಬರುವಂತೆ ಮಾಡಿದ್ದರಿಂದ ಕಳೆದ ವರ್ಷ ಕೆರೆಯಲ್ಲಿ ಯಥೇಚ್ಚ ನೀರು ಶೇಖರಣೆಯಾಗಿತ್ತು.
ಆದರೆ, ಇತ್ತೀಚಿನ ದಿನಗಳಲ್ಲಿ ರಾತ್ರೋರಾತ್ರಿ ಬಿಬಿಎಂಪಿ ವ್ಯಾಪ್ತಿಯಿಂದ ಕಸ , ಕಟ್ಟಡಗಳ ಅವಶೇಷ ತಂದು ಸುರಿಯುತ್ತಿರುವುದರಿಂದ ಕೆರೆಯ ನೀರು ಕೊಳೆತು ನಾರುತ್ತಿದೆ. ಮತ್ತೊಂದೆಡೆ ದಡದಲ್ಲಿ ಕಟ್ಟಡ ಅವಶೇಷ ತಂದು ಹಾಕಿ ಕೆರೆ ಮುಚ್ಚಲಾಗುತ್ತಿದೆ.
ರಾಮೋಹಳ್ಳಿ ರೈತ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ವಿ.ವೇಣುಗೋಪಾಲ್, ’ರಾಮೋಹಳ್ಳಿ, ಹಳೆ ಬೈರೋಹಳ್ಳಿ ಮುಖ್ಯರಸ್ತೆಯಲ್ಲಿ ಕೆರೆ ಇದ್ದು ಕೆಲವರು ದ್ವಿಚಕ್ರವಾಹನದಲ್ಲಿ ಪ್ಲಾಸ್ಟಿಕ್ ಚೀಲ, ಕವರ್ನಲ್ಲಿ ಕಸವನ್ನು ಕಟ್ಟಿ ಕೆರೆಗೆ ಎಸೆದು ಹೋಗುತ್ತಾರೆ. ಹಲವು ಬಾರಿ ಮನವಿ ಮಾಡಿದರೂ ಕಸ ಹಾಕುವುದನ್ನು ಮಾತ್ರ ಬಿಟ್ಟಿಲ್ಲ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.