ADVERTISEMENT

ಬೆಂಗಳೂರು | ‘ಕಿಮೋಥೆರಪಿ ಕೇಂದ್ರಕ್ಕೆ ನಾಳೆ ಚಾಲನೆ

ಕ್ಯಾನ್ಸರ್‌ ರೋಗಿಗಳಿಗೆ ಅನುಕೂಲ: 16 ಜಿಲ್ಲಾಸ್ಪತ್ರೆಗಳಲ್ಲಿ ಶುರು

​ಪ್ರಜಾವಾಣಿ ವಾರ್ತೆ
Published 22 ಮೇ 2025, 16:32 IST
Last Updated 22 ಮೇ 2025, 16:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕ್ಯಾನ್ಸರ್‌ ರೋಗಿಗಳ ಅನುಕೂಲಕ್ಕಾಗಿ 16 ಜಿಲ್ಲಾ ಆಸ್ಪತ್ರೆಗಳಲ್ಲಿ ‘ಡೇ ಕೇರ್ ಕಿಮೋಥೆರಪಿ’ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ‘ಡೇ ಕೇರ್‌ ಕಿಮೋಥೆರಪಿ ಕೇಂದ್ರ’ಕ್ಕೆ ಶುಕ್ರವಾರ (ಮೇ 23) ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ (ಎಸ್‌ಎಎಸ್‌ಟಿ) ನೋಂದಾಯಿತ ತೃತೀಯ ಹಂತದ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ನಂತರ ಮುಂದುವರಿದ ಕಿಮೋಥೆರಪಿ ಚಿಕಿತ್ಸೆಯನ್ನು ‘ಹಬ್‌–ಆ್ಯಂಡ್‌–ಸ್ಪೋಕ್’ ಮಾದರಿಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಾಪಿಸುವ ‘ಡೇ ಕೇರ್‌ ಕಿಮೋಥೆರಪಿ ಕೇಂದ್ರ’ಗಳಲ್ಲಿ ಪಡೆಯಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

ADVERTISEMENT

ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್‌ ಕಿಮೋಥೆರಪಿ ಕೇಂದ್ರಗಳನ್ನು ಆರಂಭಿಸಿ, ಅಲ್ಲಿನ ಸಿಬ್ಬಂದಿಗೆ ಎಸ್ಎಎಸ್‌ಟಿ ನೋಂದಾಯಿತ ಆಸ್ಪತ್ರೆಯ ಸಿಬ್ಬಂದಿಯಿಂದ ತರಬೇತಿ ಕೊಡಿಸಲಾಗುತ್ತದೆ. ಚಿಕಿತ್ಸೆಗೆ ಅಗತ್ಯವಿರುವ ಔಷಧವನ್ನೂ ಆ ಆಸ್ಪತ್ರೆಯೇ ಒದಗಿಸಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಾರ್ಷಿಕವಾಗಿ ಕ್ಯಾನ್ಸರ್‌ನ 70 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರು ನಗರಗಳಿಗೆ ಕಿಮೋಥೆರಪಿ ಸೇವೆ ಪಡೆಯಲು ಶೇ 60ರಷ್ಟು ರೋಗಿಗಳು 100 ಕಿ.ಮೀಗೂ ಹೆಚ್ಚು ಪ್ರಯಾಣಿಸುತ್ತಾರೆ. ಪುನರಾವರ್ತಿತ ಭೇಟಿ ವೆಚ್ಚದಿಂದ ಹೆಚ್ಚಿನ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಡೇ ಕೇರ್‌ ಸ್ಥಾಪನೆ ಮೂಲಕ ಕ್ಯಾನ್ಸರ್‌ ಆರೈಕೆಯಲ್ಲಿ ನಗರ– ಗ್ರಾಮೀಣ ಅಸಮಾನತೆ ಕಡಿಮೆ ಮಾಡಿ, ಪರಿಣಾಮಕಾರಿ ಆರೈಕೆ, ಆಸ್ಪತ್ರೆ ವೆಚ್ಚ ಕಡಿತ ಮಾಡುವ ಜೊತೆಗೆ, ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸುವವರ ಸಂಖ್ಯೆ ಕಡಿಮೆ ಮಾಡಲಾಗುತ್ತದೆ.

ಎಲ್ಲೆಲ್ಲಿ ‘ಡೇ ಕೇರ್‌ ಕಿಮೋಥೆರಪಿ’ ಕೇಂದ್ರ?

(ಜಿಲ್ಲೆ ಹಾಗೂ ಸೇವೆ ಒದಗಿಸುವ ಆಸ್ಪತ್ರೆ)

  • ವಿಜಯಪುರ; ಜಿಲ್ಲಾಸ್ಪತ್ರೆ

  • ಉಡುಪಿ; ಜಿಲ್ಲಾಸ್ಪತ್ರೆ

  • ಬಳ್ಳಾರಿ; ಹುಬ್ಬಳ್ಳಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

  • ಧಾರವಾಡ; ಎಚ್‌ಸಿಜಿ ಆಸ್ಪತ್ರೆ

  • ಚಿತ್ರದುರ್ಗ; ಹುಬ್ಬಳ್ಳಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

  • ವಿಜಯನಗರ; ಹುಬ್ಬಳ್ಳಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

  • ಹಾವೇರಿ; ಹುಬ್ಬಳ್ಳಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

  • ಬೆಂಗಳೂರು ಗ್ರಾಮಾಂತರ; ಸಂಜೀವಿನಿ ಆಸ್ಪತ್ರೆ

  • ರಾಮನಗರ; ಸಂಜೀವಿನಿ ಆಸ್ಪತ್ರೆ

  • ಬೆಂಗಳುರು ನಗರ; ಸಂಜೀವಿನಿ ಆಸ್ಪತ್ರೆ

  • ದಕ್ಷಿಣ ಕನ್ನಡ; ಕೆಎಂಸಿ,  ಮಂಗಳೂರು

  • ಮೈಸೂರು; ಕಿದ್ವಾಯಿ ಆಸ್ಪತ್ರೆ

  • ದಾವಣಗೆರೆ; ಹುಬ್ಬಳ್ಳಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

  • ತುಮಕೂರು; ಸಿದ್ಧಾರ್ಥ ವೈದ್ಯಕೀಯ ಕಾಲೇಜು

  • ಕೋಲಾರ; ಆರ್‌.ಎಲ್‌. ಜಾಲಪ್ಪ ವೈದ್ಯಕೀಯ ಕಾಲೇಜು– ಆಸ್ಪತ್ರೆ

  • ಬಾಗಲಕೋಟೆ; ನಿಜಲಿಂಗಪ್ಪ ವೈದ್ಯಕೀಯ ಕಾಲೇಜು– ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.