ADVERTISEMENT

ಕೋವಿಡ್‌ ನಿಯಂತ್ರಕ ಉಪಕರಣಗಳ ಬಿಡುಗಡೆ

ನವೋದ್ಯಮಗಳ ಪ್ರಯತ್ನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 8:37 IST
Last Updated 9 ಸೆಪ್ಟೆಂಬರ್ 2020, 8:37 IST
ರಾಜ್ಯದ ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಕೋವಿಡ್‌ ನಿಯಂತ್ರಕ ಉಪಕರಣಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬುಧವಾರ ಬಿಡುಗಡೆ ಮಾಡಿದರು
ರಾಜ್ಯದ ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಕೋವಿಡ್‌ ನಿಯಂತ್ರಕ ಉಪಕರಣಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬುಧವಾರ ಬಿಡುಗಡೆ ಮಾಡಿದರು   

ಬೆಂಗಳೂರು: ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್‌) ಮತ್ತು ಬೆಂಗಳೂರು ಬಯೋ ಇನ್ನೋವೇಶನ್‌ ಕೇಂದ್ರದ (ಬಿಬಿಸಿ) ಮಾರ್ಗದರ್ಶನದಲ್ಲಿ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 22 ಕೋವಿಡ್‌ ನಿಯಂತ್ರಕ ಉಪಕರಣಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬುಧವಾರ ಬಿಡುಗಡೆ ಮಾಡಿದರು.

ಕಿಟ್ಸ್‌ ಮಾರ್ಗದರ್ಶನದಲ್ಲಿ 16 ಉಪಕರಣಗಳನ್ನು ಅಭಿವೃದ್ಧಿಪಡಿಸಿದ್ದರೆ, ಬಿಬಿಸಿ ಮಾರ್ಗದರ್ಶನದಲ್ಲಿ ಆರು ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಎಲ್ಲವೂ ವಿಕಿರಣ ಮುಕ್ತ, ಸ್ಪರ್ಶ ರಹಿತತ ಕೋವಿಡ್ಡ್ಪ‌ ಪರೀಕ್ಷಾ ಮತ್ತು ನಿಗಾ ಉಪಕರಣಗಳಾಗಿವೆ. ವರ್ಚುವಲ್‌ ಸಮಾರಂಭದಲ್ಲಿ ಈ ಉಪಕರಣಗಳನ್ನು ಬಿಡುಗಡೆ ಮಾಡಿದ ಅಶ್ವತ್ಥನಾರಾಯಣ, ‘ಈ ಉತ್ಪನ್ನಗಳು ಬೆಂಗಳೂರಿನ ಮತ್ತು ಕರ್ನಾಟಕ ಅನ್ವೇಷಣಾ ಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ’ ಎಂದು ಶ್ಲಾಘಿಸಿದರು.

ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಬಳಸುವ ನ್ಯೂಕ್ಲಿಯೋಡಿಎಕ್ಸ್‌ ಆರ್‌ಟಿ, ವಂಶವಾಹಿನಿಗಳನ್ನು ಬಳಸಿ ಕೊರೊನಾ ವೈರಸ್ ಪತ್ತೆಹಚ್ಚುನ ಕೋವಿಡ್‌ಎಕ್ಸ್ ಎಂಪ್ಲೆಕ್ಸ್‌ 3ಆರ್‌ ಮತ್ತು 4ಆರ್, ದೇಹದ ಉಷ್ಣತೆಯ ಮೂಲಕ ಕೋವಿಡ್‌ ಸೋಂಕು ದೃಢಪಡಿಸುವ ಡಾ.ತಾಪಮಾನ್‌, ದೊಡ್ಡ ವಾಣಿಜ್ಯ ಸ್ಥಳಗಳಲ್ಲಿ ಬಳಸಬಹುದಾದ ಯುವಿಇಇ ಕನ್ವೇಯರ್‌ ಕ್ರಿಮಿನಾಶಕ ಯಂತ್ರ, ರೋಗಿಗಳ ಉಸಿರಾಟಕ್ಕೆ ನೆರವಾಗುವ ರೆಸ್ಪಿರ್‌ ಏಯ್ಡ್‌ ಯಂತ್ರ, ‌‌‌ಜನರು 3ರಿಂದ 5 ಮೀಟರ್‌ ಅಂತರದಲ್ಲಿ ಹಾದು ಹೋಗುತ್ತಿರುವಾಗಲೇ ದೇಹದ ಉಷ್ಣತೆ ಅಳೆಯಬಲ್ಲ ಪಿಕ್ಸುಯೇಟ್‌ ಯಂತ್ರ, ರೋಗಿಯ ದೇಹಸ್ಥಿತಿ ಮಾಪನದ ಅಂಕಿಅಂಶಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕವೈದ್ಯರಿಗೆ ರವಾನಿಸಬಲ್ಲ ಡಾಕ್ಸ್‌ಪರ್‌ ತಂತ್ರಜ್ಞಾನಗಳು ಇದರಲ್ಲಿ ಸೇರಿವೆ.

ADVERTISEMENT

ಮೊಬೈಲ್‌ ಫೋನ್‌ ಕ್ಯಾಮೆರಾದಿಂದ ಬೆರಳಚ್ಚಿನ ಜೈವಿಕ ಚಹರೆ ಸೆರೆ ಹಿಡಿಯಬಲ್ಲ ಟಚ್‌ಲೆಸ್‌ ಐಡಿ ಮತ್ತು ರೋಗಿಯ ಹಾಸಿಗೆಯ ತಳಭಾಗದಲ್ಲಿ ಸೆನ್ಸಾರ್‌ ಹಾಳೆ ಇರಿಸಿ ಹೃದಯಬಡಿತ, ಉಸಿರಾಟ, ಆಮ್ಲಜನಕದ ಮಟ್ಟವನ್ನು ಅಳೆಯಬಲ್ಲ ‘ಡೋಜೀ’ ಎಂಬ ಉಪಕರಣಗಳನ್ನೂ ಉಪ ಮುಖ್ಯಮಂತ್ರಿ ಬಿಡುಗಡೆ ಮಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಆಯೋಗದ ಮುಖ್ಯಸ್ಥೆ ಡಾ.ಅನಿತಾ ಗುಪ್ತಾ, ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ಐಟಿ ಮತ್ತು ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.