ಬೆಂಗಳೂರು: ನಗರದಲ್ಲಿ ನೆಲೆಸಿರುವ ಬೇರ ಊರಿನ ಜನರು, ದೀಪಾವಳಿ ಹಬ್ಬ ಆಚರಣೆಗಾಗಿ ಶುಕ್ರವಾರ ರಾತ್ರಿಯೇ ತಮ್ಮೂರಿನತ್ತ ಹೊರಟರು. ಸಾರಿಗೆ ನಿಗಮ ಬಸ್, ಖಾಸಗಿ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಹೆಚ್ಚಿದ್ದರಿಂದ ಹಲವೆಡೆ ಸಂಚಾರ ದಟ್ಟಣೆ ಕಂಡುಬಂತು.
ಶನಿವಾರದಿಂದ ಸರಣಿ ರಜೆ ಇರುವುದರಿಂದ ಹಬ್ಬಕ್ಕೂ ಮುನ್ನಾದಿನವೇ ಬಹುತೇಕ ಜನ ಊರಿನತ್ತ ತೆರಳಿದರು. ಸಂಜೆಯಿಂದಲೇ ಮೆಜೆಸ್ಟಿಕ್ ಬಸ್ ನಿಲ್ದಾಣಗಳತ್ತ ಬರಲಾರಂಭಿಸಿದ್ದರು. ಲಗೇಜು ಸಮೇತ ಗುಂಪು ಗುಂಪಾಗಿ ನಿಂತಿದ್ದು ಕಂಡುಬಂತು.
ನಗರದ ಬೇರೆ ಬೇರೆ ಪ್ರದೇಶಗಳಿಂದ ಜನ ವಾಹನಗಳಲ್ಲಿ ಮೆಜೆಸ್ಟಿಕ್ಗೆ ಬಂದಿದ್ದರು. ವಾಹನಗಳ ಸಂಖ್ಯೆ ಹೆಚ್ಚಾಗಿ ದಟ್ಟಣೆ ಉಂಟಾಯಿತು. ನಗರದಿಂದ ಬೇರೆ ಊರುಗಳಿಗೆ ಹೊರಟಿದ್ದ ಬಸ್ಗಳು ದಟ್ಟಣೆಯಲ್ಲಿ ಸಿಲುಕಿದ್ದವು.
ಚಾಲುಕ್ಯ ವೃತ್ತ, ಆನಂದರಾವ್ ವೃತ್ತ, ಮೈಸೂರು ರಸ್ತೆ, ಯಶವಂತಪುರ, ಆರ್ಎಂಸಿ ಯಾರ್ಡ್, ತುಮಕೂರು ರಸ್ತೆ, ಹೊಸೂರು ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಇತ್ತು.
ಲಾಕ್ಡೌನ್ ತೆರವಾದ ನಂತರ ಖಾಸಗಿ ಬಸ್ಗಳ ಓಡಾಟ ಆರಂಭವಾಗಿದ್ದು, ನಿಗದಿಯಷ್ಟು ಬಸ್ ಸಂಚರಿಸುತ್ತಿಲ್ಲ. ಕೆಎಸ್ಆರ್ಟಿಸಿಯಿಂದ 1 ಸಾವಿರ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರ್ಗಿ ಹಾಗೂ ಇತರೆ ನಗರಗಳಿಗೆ ಹೋಗುವವರ ಸಂಖ್ಯೆಯೇ ಹೆಚ್ಚಿತ್ತು.
ನೆಲಮಂಗಲ, ದೇವನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಟೋಲ್ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ನಗರ ದಾಟಲು ಸಾಕಷ್ಟು ಸಮಯ ಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.