ಬೆಂಗಳೂರು: ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ಕದ್ದು ಜಾಲಿರೈಡ್ ಮಾಡಿ ಮಾರುತ್ತಿದ್ದ ಜಾಲವನ್ನು ಬನಶಂಕರಿ ಠಾಣೆ ಪೊಲೀಸರು ಭೇದಿಸಿದ್ದು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
‘ಆಂಧ್ರಪ್ರದೇಶದ ವಿಜಯ ಬಂಡಿ (25), ಹೇಮಂತ್ (27), ಗುಣಶೇಖರ್ ರೆಡ್ಡಿ (30), ಭಾನುಮೂರ್ತಿ (25), ಪುರುಷೋತ್ತಮ ನಾಯ್ಡು (30), ಕಾರ್ತಿಕ್ ಕುಮಾರ್ (27) ಹಾಗೂ ಕಿರಣ್ಕುಮಾರ್ (22) ಬಂಧಿತರು. ಇವರಿಂದ ₹ 68 ಲಕ್ಷ ಮೌಲ್ಯದ 30 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ತ್ಯಾಗರಾಜನಗರದ ಮನೆಯೊಂದರ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಫೆ. 26ರಂದು ಕಳ್ಳತನವಾಗಿತ್ತು. ಈ ಬಗ್ಗೆ ಅದರ ಮಾಲೀಕರು ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಬೈಕ್ ಕಳ್ಳತನ ಮಾಡುತ್ತಿದ್ದ ಜಾಲ ಪತ್ತೆಯಾಯಿತು’ ಎಂದೂ ತಿಳಿಸಿದರು.
ವಿಡಿಯೊ ನೋಡಿ ಸಂಚು: ‘ಬಂಧಿತ ಆರೋಪಿಗಳು, ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಎಂಬಿಎ ಪದವೀಧರರು. ಕೆಲವೆಡೆ ಕೆಲಸಕ್ಕೆ ಸೇರಿದರೂ ವೇತನ ಸಾಕಾಗಿರಲಿಲ್ಲ. ಹೀಗಾಗಿ ಕೆಲಸ ಬಿಟ್ಟಿದ್ದರು. ಐಷಾರಾಮಿ ಜೀವನ ನಡೆಸಬೇಕೆಂದು ಕಳ್ಳತನಕ್ಕೆ ಇಳಿದಿದ್ದರು’ ಎಂದು ಪೊಲೀಸರು ಹೇಳಿದರು.
‘ಬೈಕ್ ಲಾಕ್ ತೆರೆಯುವುದು ಹೇಗೆ ? ಕಳ್ಳತನ ಮಾಡುವುದು ಹೇಗೆ’ ಎಂಬ ಬಗ್ಗೆ ಆರೋಪಿಗಳು, ಯೂಟ್ಯೂಬ್ನಲ್ಲಿ ವಿಡಿಯೊ ನೋಡಿ ತಿಳಿದುಕೊಂಡಿದ್ದರು. ನಂತರ ಸಂಚು ರೂಪಿಸಿ ಲಾಕ್ ಮುರಿದು ಬೈಕ್ ಕಳ್ಳತನ ಮಾಡಿದ್ದರು’ ಎಂದೂ ತಿಳಿಸಿದರು.
‘ಕದ್ದ ಬೈಕ್ಗಳಲ್ಲಿ ಆರೋಪಿಗಳು, ಜಾಲಿರೈಡ್ ಮಾಡುತ್ತಿದ್ದರು. ನಂತರ ಬೈಕ್ಗಳನ್ನು ಆಂಧ್ರಪ್ರದೇಶದಲ್ಲಿ ಮಾರುತ್ತಿದ್ದರು. ನಗರದ ಕೆ.ಆರ್.ಪುರ, ಬನಶಂಕರಿ, ಚನ್ನಮ್ಮನಕೆರೆ ಅಚ್ಚುಕಟ್ಟು, ಸುಬ್ರಹ್ಮಣ್ಯಪುರ, ಜಯನಗರ, ಕುಮಾರಸ್ವಾಮಿ ಲೇಔಟ್, ಜೆ.ಪಿ. ನಗರ, ಮೈಕೊ ಲೇಔಟ್, ಬೇಗೂರು, ಬಾಣಸವಾಡಿ, ಮಾರತ್ತಹಳ್ಳಿ, ಹೊಸಕೋಟೆ ಹಾಗೂ ಜಗಜೀವನ್ರಾಮ್ ನಗರ ಠಾಣೆಗಳ ವ್ಯಾಪ್ತಿಗಳಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.