ಬೆಂಗಳೂರು:ಲಾಕ್ ಡೌನ್ನಿಂದಾಗಿ ಆಸ್ಪತ್ರೆಯನ್ನು ಹುಡುಕಿಕೊಂಡು ಏಳು ಕಿ.ಮೀ. ನಡೆದ ಗರ್ಭಿಣಿ, ರಸ್ತೆಯಲ್ಲಿಯೇ ಮಗುವಿಗೆ ಜನ್ಮನೀಡಿದ್ದಾಳೆ. ಸಮಯಕ್ಕೆ ಸರಿಯಾಗಿ ದಂತ ವೈದ್ಯರೊಬ್ಬರು ಅವರ ನೆರವಿಗೆ ಬಂದ ಪರಿಣಾಮ ತಾಯಿ ಮತ್ತು ಮಗು ಅಪಾಯದಿಂದ ಪಾರಾಗಿದ್ದಾರೆ.
ಮಧ್ಯ ಪ್ರದೇಶದ ದಂಪತಿ ನಗರದಲ್ಲಿ ಕಟ್ಟಡ ಕಾರ್ಮಿಕರಾಗಿದ್ದು, ಲಾಕ್ ಡೌನ್ನಿಂದಾಗಿ ಅವರಿಗೆ ತಮ್ಮ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗಾಗಿ ದಂಪತಿ ದಾರಿಯುದ್ದಕ್ಕೂ ವಿಚಾರಿಸಿದ್ದಾರೆ. ಆದರೆ, ಭಾಷಾ ಸಮಸ್ಯೆಯಿಂದಾಗಿ ಅವರಿಗೆ ಅಗತ್ಯ ಮಾಹಿತಿ ದೊರೆಯಲಿಲ್ಲ. ಇದರಿಂದಾಗಿ ಒಂದೇ ಸಮನೆ ಆಸ್ಪತ್ರೆಗಾಗಿ ಹುಡುಕಾಟ ನಡೆಸಿದ್ದಾರೆ. ಅಂತಿಮವಾಗಿ ದೊಡ್ಡ ಬೊಮ್ಮಸಂದ್ರದ ಕೃಪಾ ಕ್ಲಿನಿಕ್ ಮುಂಭಾಗದಲ್ಲಿ 20 ವರ್ಷದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಅವಧಿ ಪೂರ್ವ ಹೆರಿಗೆಯಾಗಿದ್ದು, ಮಹಿಳೆ ಅಧಿಕ ರಕ್ತಸ್ರಾವದಿಂದ ನರಳಾಟ ನಡೆಸಿದ್ದರು.ಈ ಘಟನೆ ಏ.14 ರಂದು ಬೆಳಿಗ್ಗೆ 8.30ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಾನವೀಯತೆ ಮೆರೆದ ವೈದ್ಯೆ: ಕ್ಲಿನಿಕ್ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಸ್ಥಳಕ್ಕೆ ಬಂದ ವೈದ್ಯೆ ಡಾ. ರಮ್ಯಾ ಹಿಮಾನಿಶ್, ಸಿಬ್ಬಂದಿಯ ನೆರವು ಪಡೆದು ಮಹಿಳೆಗೆ ಆಗುತ್ತಿದ್ದ ರಕ್ತಸ್ರಾವವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೃತಪಟ್ಟಿದೆ ಅಂದುಕೊಂಡಿದ್ದಮಗುವಿನ ಬಾಯಿ ಹಾಗೂ ಮೂಗಿನಲ್ಲಿ ಸೇರಿಕೊಂಡಿದ್ದ ಮಣ್ಣನ್ನು ಅವರು ಹೊರತೆಗೆದು, ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಇದರಿಂದಾಗಿ ಮಗು ಉಸಿರಾಟ ನಡೆಸಲು ಆರಂಭಿಸಿತು. ಬಳಿಕ ತಾಯಿ ಹಾಗೂ ಮಗುವನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಮಗು ಹಾಗೂ ತಾಯಿ ಆರೋಗ್ಯದಿಂದ ಇದ್ದಾರೆ.
‘18 ವರ್ಷಗಳಿಂದಕ್ಲಿನಿಕ್ ನಡೆಸುತ್ತಿದ್ದೇನೆ. ಎಂದೂ ಕ್ಲಿನಿಕ್ ಮುಚ್ಚಿಲ್ಲ. ಲಾಕ್ ಡೌನ್ ಇದ್ದರೂ ತೆರೆದಿತ್ತು. ನಾನು ಸ್ಥಳಕ್ಕೆ ಬರುವಷ್ಟರಲ್ಲಿ ಮಹಿಳೆಗೆ ಅಧಿಕ ರಕ್ತಸ್ರಾವವಾಗಿತ್ತು. ಮಗು ಮೃತಪಟ್ಟಿದೆ ಅಂದುಕೊಂಡು ಮಹಿಳೆಗೆ ಚಿಕಿತ್ಸೆ ನೀಡಲು ಮುಂದಾದೆದವು. ಕ್ಲಿನಿಕ್ ಚಿಕ್ಕದಾಗಿದ್ದರಿಂದ ನಮಗೂ ಕಷ್ಟವಾಯಿತು. ಅಂತಿಮವಾಗಿ ತಾಯಿ ಹಾಗೂ ಮಗು ಇಬ್ಬರನ್ನೂ ಉಳಿಸಿಕೊಂಡೆವು’ ಎಂದು ಡಾ. ರಮ್ಯಾ ಸಂತಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.