ADVERTISEMENT

ಕೋವಿಡ್ ಇಳಿಮುಖವಾಗಿರುವುದರಿಂದ ಕರಗ, ಜಾತ್ರೆಗೆ ಅವಕಾಶ ನೀಡಿ: ಪಿ.ಆರ್. ರಮೇಶ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 20:36 IST
Last Updated 8 ಫೆಬ್ರುವರಿ 2022, 20:36 IST
ಪಿ.ಆರ್.ರಮೇಶ್
ಪಿ.ಆರ್.ರಮೇಶ್   

ಬೆಂಗಳೂರು: ಕೋವಿಡ್ ಇಳಿಮುಖವಾಗಿರುವುದರಿಂದ ರಾಜ್ಯದಲ್ಲಿ ಕರಗ ಉತ್ಸವ ಮತ್ತು ಜಾತ್ರೆಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಅವರು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದ 140ಕ್ಕೂ ಹೆಚ್ಚು ಧರ್ಮರಾಯಸ್ವಾಮಿ ಮತ್ತು ದ್ರೌಪದಮ್ಮ ದೇವಸ್ಥಾನಗಳಲ್ಲಿ ಪ್ರತಿ ವರ್ಷವೂ ಕರಗ ಆಚರಿಸಲಾಗುತ್ತಿತ್ತು. ಅದೇ ರೀತಿ ಇತರ ದೇವಸ್ಥಾನಗಳಲ್ಲಿ ಜಾತ್ರೆ, ಉತ್ಸವ ನಡೆಸಲಾಗುತ್ತಿತ್ತು. ಕೋವಿಡ್ ಕಾರಣದಿಂದ ಎರಡು ವರ್ಷದಿಂದ ಜಾತ್ರೆ, ಕರಗ, ಉತ್ಸವ ನಡೆದಿಲ್ಲ.ಈಗ ಇತರ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಲಾಗಿದೆ. ಅದೇ ರೀತಿ ಕರಗ, ಜಾತ್ರೆಗಳ ಮೇಲಿನ ನಿರ್ಬಂಧವನ್ನೂ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅಡಿಯಲ್ಲಿ ಸೀಮಿತವಾಗಿ ಕರಗ ಆಚರಿಸಲಾಗಿದೆ. ಈ ವರ್ಷ ಪೂರ್ಣ ಪ್ರಮಾಣದಲ್ಲಿ ಜನರು ಭಾಗವಹಿಸಲು ಅವಕಾಶ ನೀಡಬೇಕು ಎಂದು ಪಿ.ಆರ್. ರಮೇಶ್ ಅವರು ಪತ್ರದಲ್ಲಿ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.