ADVERTISEMENT

ವಿದ್ಯುತ್ ವಿನಾಯಿತಿ ಸೌಲಭ್ಯ ವಿಸ್ತರಣೆಗೆ ಆಗ್ರಹ

ಪೀಣ್ಯ ಕೈಗಾರಿಕೆ ಪ್ರದೇಶ ಪ್ರತಿನಿಧಿಗಳಿಂದ ಬೆಸ್ಕಾಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಮೇ 2022, 20:30 IST
Last Updated 28 ಮೇ 2022, 20:30 IST
ಪೀಣ್ಯ ಕೈಗಾರಿಕೆ ವಲಯದ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಮಾತನಾಡಿದರು
ಪೀಣ್ಯ ಕೈಗಾರಿಕೆ ವಲಯದ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಮಾತನಾಡಿದರು   

ಬೆಂಗಳೂರು: ಕೈಗಾರಿಕೆ ವಲಯಕ್ಕೆ ನೀಡುತ್ತಿರುವ ರಿಯಾಯಿತಿ ದರದ ವಿದ್ಯುತ್ ಸೌಲಭ್ಯಗಳನ್ನು ಕನಿಷ್ಠ 5 ರಿಂದ 10 ವರ್ಷಗಳ ಅವಧಿಗೆ ವಿಸ್ತರಿಸಬೇಕು ಎಂದು ಪೀಣ್ಯ ಕೈಗಾರಿಕೆ ವಲಯದ ಪ್ರತಿನಿಧಿಗಳು ಬೆಸ್ಕಾಂಗೆ ಮನವಿ ಮಾಡಿದ್ದಾರೆ.

ಪೀಣ್ಯ ಕೈಗಾರಿಕೆ ವಲಯದ ಪ್ರತಿನಿಧಿಗಳ ಜತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಮತ್ತು ಹಿರಿಯ ಅಧಿಕಾರಿಗಳು ಮಂಗಳವಾರ ನಡೆಸಿದ ಸಭೆಯಲ್ಲಿ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಪೀಣ್ಯ ವಲಯದ ಉಪವಿಭಾಗ–4ರಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಪೀಣ್ಯ ಕೈಗಾರಿಕೆ ಪ್ರದೇಶಗಳಿಗೆ ಈಗ ತಡೆರಹಿತ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಕುಂಬಳಗೋಡು ವಲಯದ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ADVERTISEMENT

ಪೀಣ್ಯ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಮೀಟರ್ ಪರೀಕ್ಷೆ (ಎಂಟಿ) ಮತ್ತು ವಿಚಕ್ಷಣ ದಳ ಸಿಬ್ಬಂದಿಯಿಂದಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆಂತರಿಕ ಸಮಿತಿಯೊಂದನ್ನು ರಚಿಸುವುದಾಗಿ ರಾಜೇಂದ್ರ ಚೋಳನ್ ಭರವಸೆ ನೀಡಿದರು.

ಬೆಸ್ಕಾಂ ನಿರ್ದೇಶಕ (ತಾಂತ್ರಿಕ) ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಪೀಣ್ಯ ಕೈಗಾರಿಕೆ ವಲಯದ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಕೈಗಾರಿಕೆ ವಲಯದ ಪ್ರತಿನಿಧಿಗಳು ಎದುರಿಸುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಈ ಸಮಿತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.