ADVERTISEMENT

ಅಂಬೇಡ್ಕರ್ ಸಂಘದ ಕಚೇರಿ ಧ್ವಂಸ: 6 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:20 IST
Last Updated 14 ಮೇ 2019, 20:20 IST
ಸೂರ್ಯ
ಸೂರ್ಯ   

ಬೆಂಗಳೂರು:‌ ಕೋರಮಂಗಲ ಸಮೀಪದ ಶಾಸ್ತ್ರಿನಗರದಲ್ಲಿ ಅಂಬೇಡ್ಕರ್ ಸಂಘದ ಕಚೇರಿ ಧ್ವಂಸ ಮಾಡಿ, ರಸ್ತೆ ಬದಿ ನಿಲ್ಲಿಸಿದ್ದ 21 ವಾಹನಗಳನ್ನು ಜಖಂ ಮಾಡಿದ್ದ ಆರು ಮಂದಿಯನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

‘ರಾಜೇಂದ್ರನಗರದ ಸೂರ್ಯ ಅಲಿಯಾಸ್ ಜೋಗಿ, ಸತೀಶ್ ಅಲಿಯಾಸ್ ಬಿಲ್ಲಾ, ಸಂತೋಷ್ ಅಲಿಯಾಸ್ ಏಲಕ್ಕಿ, ಮದನ್, ಟೈಟಾಸ್ ಹಾಗೂ ಪ್ರಶಾಂತ್ ಅಲಿಯಾಸ್ ಟ್ಯಾಟೂ ಎಂಬುವರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ನಸುಕಿನ ವೇಳೆ (2.30ರ ಸುಮಾರಿಗೆ) ಮಾರಕಾಸ್ತ್ರ ಹಿಡಿದು ಶಾಸ್ತ್ರಿನಗರಕ್ಕೆ ಬಂದಿದ್ದ ಆರೋಪಿಗಳು, ಬಾರ್ ವ್ಯವಸ್ಥಾಪಕ ಗೋಪಿ ಎಂಬುವರ ಮನೆಗೆ ಕಲ್ಲು ತೂರಿ ಗಾಜು ಪುಡಿ ಮಾಡಿದ್ದರು. ಅಂಬೇಡ್ಕರ್ ಸಂಘದ ಕಚೇರಿಯ ಬಾಗಿಲನ್ನೂ ಮುರಿದು ಹಾಕಿ, ರಸ್ತೆ ಬದಿ ನಿಲ್ಲಿಸಿದ್ದ 17 ಬೈಕ್‌ಗಳು, ಮೂರು ಆಟೊಗಳು ಹಾಗೂ ಕಾರು ಜಖಂಗೊಳಿಸಿ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಪರಾರಿಯಾಗಿದ್ದರು.

ADVERTISEMENT

ಈ ಸಂಬಂಧ ಗೋಪಿ ಕೊಟ್ಟ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಆಧರಿಸಿ ಸಿಎಆರ್ ದಕ್ಷಿಣ ವಸತಿ ಸಮುಚ್ಚಯದ ಬಳಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ‘ಸೂರ್ಯನ ಗ್ಯಾಂಗ್‌ನ ಪುಂಡಾಟಿಕೆ ಬಗ್ಗೆ ಸ್ಥಳೀಯರು ಆಗಾಗ್ಗೆ ಪೊಲೀಸರಿಗೆ ಮಾಹಿತಿ ಕೊಡುತ್ತಿದ್ದರು. ಇದರಿಂದ ಕುಪಿತಗೊಂಡಿದ್ದ ಆರೋಪಿಗಳು, ದೂರು ಕೊಡುವವರನ್ನು ಬೆದರಿಸಿ ಏರಿಯಾದಲ್ಲಿ ‘ಹವಾ’ ಸೃಷ್ಟಿಸಿಕೊಳ್ಳಲು ಈ ರೀತಿ ದಾಳಿ ನಡೆಸಿದ್ದರು. ನ್ಯಾಯಾಧೀಶರ ಆದೇಶದಂತೆ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.