ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ನಗರದ ಪ್ರಮುಖ 12 ವೃತ್ತಗಳನ್ನು ಆಕರ್ಷಣೀಯಗೊಳಿಸಲು ಮುಂದಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ
ಹಾಗೂ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಈ ಸಂಬಂಧ ವಾಸ್ತುಶಿಲ್ಪಿಗಳ ಜೊತೆ ಸೋಮವಾರ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಗುಪ್ತ, ‘ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಹಾಗೂ ವೃತ್ತಗಳನ್ನು ಆಕರ್ಷಣೀಯಗೊಳಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವಾಸ್ತುಶಿಲ್ಪಿಗಳು ವಿವಿಧ ಪರಿಕಲ್ಪನೆಗಳನ್ನಿಟ್ಟುಕೊಂಡು ವೃತ್ತಗಳ ವಿನ್ಯಾಸ ಸಿದ್ಧಪಡಿಸಿದ್ದಾರೆ. ಅವುಗಳನ್ನು ಕಾರ್ಯಗತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
‘ಚಾಲುಕ್ಯ ವೃತ್ತದಲ್ಲಿ ಚಾಲುಕ್ಯರ ಕಾಲದ ಗತವೈಭವ ಬಿಂಬಿಸುವುದು, ಅನಿಲ್ ಕುಂಬ್ಳೆ ವೃತ್ತವನ್ನು ಕ್ರೀಡಾ ಆಸಕ್ತಿಯ ಪರಿಕಲ್ಪನೆಯಡಿ ವಿನ್ಯಾಸಗೊಳಿಸುವುದು, ಮೈಸೂರು ಬ್ಯಾಂಕ್ ವೃತ್ತವನ್ನು ಪ್ರಸಿದ್ಧ ಕರಗ ಮಹೋತ್ಸವದ ವೈಭವದ ಮಾದರಿಯಲ್ಲಿ ರೂಪಿಸುವ ಉದ್ದೇಶವಿದೆ. ಪಾದಚಾರಿ ಮಾರ್ಗಗಳ ಸೌಂದರ್ಯೀಕರಣಕ್ಕೂ ಹೆಚ್ಚು ಒತ್ತು ನೀಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.