ಬೆಂಗಳೂರು: ‘ಇಬ್ಬರು ನಾಯಕರು ತಮ್ಮ ಸ್ವಾರ್ಥಕ್ಕಾಗಿ ಧರಂಸಿಂಗ್ ನೇತೃತ್ವದ ಸರ್ಕಾರವನ್ನು ಉರುಳಿಸಿದರು. ಆ ಮೂಲಕ ರಾಜ್ಯ ರಾಜಕಾರಣಕ್ಕೆ ಬರಬಾರದ ರೋಗ ತಂದಿಟ್ಟರು’ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿದರು.
‘ಒಂದು ವೇಳೆ ಧರಂಸಿಂಗ್ ಅವರು ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದರೆ ಇಂತಹ ಕಾರ್ಯ ಮಾಡಲು ಸಾಧ್ಯವಿತ್ತೇ’ ಎಂದು ಪ್ರಶ್ನಿಸಿದ ಅವರು, ‘ಸಿಂಗ್ ಅವರು ದುರ್ಬಲ ಸಮುದಾಯಕ್ಕೆ ಸೇರಿದ್ದರಿಂದಾಗಿ ಈ ಇಬ್ಬರು ಮಹಾನ್ ಮುಖಂಡರು ಪಿತೂರಿ ನಡೆಸಿ ಸರ್ಕಾರವನ್ನು ನಿರಾಯಾಸವಾಗಿ ಕೆಡವಿದರು’ ಎಂದರು.
ಪತ್ರಕರ್ತ ಆರ್.ಟಿ. ವಿಠ್ಠಲಮೂರ್ತಿ ಅವರು ಕರ್ನಾಟಕದ ರಾಜಕೀಯ ಕುರಿತು ಬರೆದ ‘ರಾಜ ಚರಿತೆ’ ಪುಸ್ತಕವನ್ನು ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೆಂಗಲ್ ಹನುಮಂತಯ್ಯ ಅವರದ್ದು ಹಲವು ಮಹಾನುಭಾವರಿದ್ದ ಸತ್ಯಹರಿಶ್ಚಂದ್ರನ ಸಂಪುಟ. ಇನ್ನು ಮುಂದೆ ಕನಸಿನಲ್ಲೂ ಅಂತಹ ಸಂಪುಟವನ್ನು ನೋಡಲು ಸಾಧ್ಯವಿಲ್ಲ. ಕೆಂಗಲ್ ಅವರ ಸಂಪುಟದಲ್ಲಿದ್ದ ಸಿದ್ಧಲಿಂಗಯ್ಯ ಅವರು ತಮ್ಮ ಕುಟುಂಬದವರೊಬ್ಬರ ವಿರುದ್ಧ ಆರೋಪ ಬಂದಾಗ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಆದರೆ, ಈಗಿನ ಆಡಳಿತಗಾರರ ಬಾಯಿ ದೊಡ್ಡದು. ಹಡಗನ್ನೇ ಸುಲಭವಾಗಿ ನುಂಗಿ ಜೀರ್ಣಿಸಿಕೊಳ್ಳುತ್ತಾರೆ
ಎಂದು ಅವರು ಟೀಕಿಸಿದರು.
ಈಗಿನ ರಾಜಕಾರಣ ತಲುಪಿರುವ ಸ್ಥಿತಿ ನೋಡಿದರೆ ಗಾಬರಿಯಾಗುತ್ತದೆ. ಒಂದು ಕಾಲದಲ್ಲಿ ಅಡುಗೆ ಅನಿಲಕ್ಕೆ ಎರಡು ರೂಪಾಯಿ ಹೆಚ್ಚಳವಾದರೆ ರಾಜಕೀಯ ಪಕ್ಷಗಳು ಬೀದಿಗಿಳಿಯುತ್ತಿದ್ದವು. ಆದರೆ ಈಗ ಇಪ್ಪತ್ತೈದು ರೂಪಾಯಿ ಜಾಸ್ತಿಯಾದರೆ ಜನರೂ ಮಾತನಾಡುವುದಿಲ್ಲ. ವಿರೋಧ ಪಕ್ಷಗಳಿಗೂ ಅದರ ವಿರುದ್ಧ ಹೋರಾಡುವ ಕೆಚ್ಚಿಲ್ಲ ಎಂದು ವಾಟಾಳ್ ಹೇಳಿದರು.
ಕೃತಿ ಕುರಿತು ಮಾತನಾಡಿದ ಪತ್ರಕರ್ತ ಬೆಲಗೂರು ಸಮೀವುಲ್ಲಾ, ‘ಕರ್ನಾಟಕದ ರಾಜಕಾರಣ ನಡೆದುಕೊಂಡು ಬಂದ ರೀತಿಯನ್ನು ವಿವರಿಸುವ ಪುಸ್ತಕ, ಜಾತಿ ಸೈನ್ಯಗಳಿಗೆ ಮಠಾಧಿಪತಿಗಳು ಸೇನಾಧಿಪತಿಗಳಾದ ದುರಂತ ಸ್ಥಿತಿಯನ್ನು ಹೇಳುತ್ತದೆ’ ಎಂದರು.
ಸಾಧನ ಪಬ್ಲಿಕೇಷನ್ಸ್ನ ರವಿಚಂದ್ರ ಹಾಗೂ ಪತ್ರಕರ್ತ ರಾಜಶೇಖರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.