ಧರ್ಮಸ್ಥಳ ಎಸ್ಐಟಿ ವಿಚಾರಣೆಗೆ ಸಂಬಂಧಿಸಿದಂತೆ ಸರ್ಕಾರ ಜನಪರ ಕಾಳಜಿ ವಹಿಸಬೇಕೆಂದು ಆಗ್ರಹಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ 20 ವರ್ಷಗಳಲ್ಲಿ ನಡೆದಿರುವ ಅತ್ಯಾಚಾರ, ಅಸಹಜ ಸಾವು, ಕೊಲೆ ಪ್ರಕರಣಗಳನ್ನು ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿ ಇರುವಂತೆಯೇ ಪೂರ್ಣ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ‘ನ್ಯಾಯ ಸಮಾವೇಶ’ ನಡೆಯಿತು.
ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ, ಸೌಜನ್ಯ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ, ಆರ್ಥಿಕ ಅಪರಾಧದ ಆರೋಪ ಪ್ರಕರಣಗಳನ್ನು ಈಗ ರಚಿಸಲಾಗಿರುವ ಎಸ್ಐಟಿಗೆ ವಹಿಸಲು ಸಮಸ್ಯೆಗಳಿದ್ದಲ್ಲಿ ಪ್ರತ್ಯೇಕವಾಗಿ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಒಳಪಡಿಸಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.
ಹೋರಾಟಗಾರರನ್ನು ಗುರಿಯಾಗಿಸುವುದನ್ನು ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಸಂಸದೆ ಸುಭಾಷಿಣಿ ಅಲಿ ಮಾತನಾಡಿ, ‘ಧರ್ಮಸ್ಥಳದಲ್ಲಿ ದಲಿತರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲಿರುವ ವ್ಯವಸ್ಥೆ ಮನುಸ್ಮೃತಿಯ ಆಧಾರದ ಮೇಲೆ ನಿಂತಿದೆ. ಅತ್ಯಾಚಾರ ಮತ್ತು ಕೊಲೆಗಳನ್ನು ಖಂಡಿಸಿದರೆ ಜೀವಬೆದರಿಕೆ ಹಾಕಲಾಗುತ್ತಿದೆ’ ಎಂದು ಹೇಳಿದರು.
‘ನಾವು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹಾಸನದಲ್ಲಿ ಹೋರಾಟ ನಡೆಸಿದೆವು. ಪ್ರಜ್ವಲ್ ಜೈಲು ಪಾಲಾಗುವಂತೆ ಮಾಡಿದೆವು. ಹಾಸನದಲ್ಲಿ ಒಬ್ಬ ಅಪರಾಧಿಯಾದರೆ, ಧರ್ಮಸ್ಥಳದಲ್ಲಿ ಇಡೀ ವ್ಯವಸ್ಥೆಯೇ ಅಪರಾಧದಲ್ಲಿ ಭಾಗಿಯಾಗಿದೆ’ ಎಂದು ಆರೋಪಿಸಿದರು.
ವಕೀಲ ಎಸ್. ಬಾಲನ್ ಮಾತನಾಡಿ, ‘ಸೌಜನ್ಯ ಪ್ರಕರಣದಲ್ಲಿ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪದ್ಮಲತಾ, ವೇದವಲ್ಲಿ ಸಹಿತ ಉಳಿದೆಲ್ಲ ಪ್ರಕರಣಗಳಲ್ಲಿ ಸಿ ರಿಪೋರ್ಟ್ ಹಾಕಲಾಗಿದೆ. ಸೌಜನ್ಯ ಪ್ರಕರಣದಲ್ಲಿಯೂ ಮೃತದೇಹ ಸಿಕ್ಕಿದ ಜಾಗವನ್ನಷ್ಟೇ ಮಹಜರು ನಡೆಸಲಾಗಿದೆ. ಅಪಹರಣವಾದ ಸ್ಥಳ, ಅತ್ಯಾಚಾರವಾದ ಸ್ಥಳ, ಕೊಲೆಯಾದ ಸ್ಥಳಗಳನ್ನು ಮಹಜರು ನಡೆಸಿಲ್ಲ. ಆ ನಂತರ ಮರಣೋತ್ತರ ಪರೀಕ್ಷೆ ನಡೆಸುವಾಗ ಪ್ರಾಥಮಿಕ ಸಾಕ್ಷ್ಯಗಳನ್ನೂ ಕಾಪಾಡಿಲ್ಲ. ಹಾಗಾಗಿ ಮಹಜರು ನಡೆಸಿದವರನ್ನು, ಮರಣೋತ್ತರ ಪರೀಕ್ಷೆ ನಡೆಸಿದವರನ್ನು ಜೈಲಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದರು.
‘ಸೌಜನ್ಯ ಪ್ರಕರಣದಲ್ಲಿ, ಸೌಜನ್ಯರ ತಾಯಿಯ ದೂರನ್ನು ದಾಖಲಿಸಲಿಲ್ಲ. ಆನೆ ಮಾವುತ ನಾರಾಯಣ ಮತ್ತು ಅವರ ತಂಗಿ ಯಮುನ ಕೊಲೆ ಪ್ರಕರಣದಲ್ಲಿ ನಾರಾಯಣ ಅವರ ತಂಗಿ ನೀಡಿದ ದೂರನ್ನು ಸ್ವೀಕರಿಸದೇ ಹೊರಗಿನವರಾದ ರಾಜೇಂದ್ರ ರೈ ನೀಡಿದ ದೂರನ್ನು ಪೊಲೀಸರು ಸ್ವೀಕರಿಸಿದ್ದರು. ವೇದವಲ್ಲಿ ಪ್ರಕರಣದಲ್ಲಿ ಅವರ ಪತಿಯನ್ನೇ ಆರೋಪಿಯನ್ನಾಗಿ ಮಾಡಿದ್ದರು. ಇದೆಲ್ಲ ಷಡ್ಯಂತ್ರ ಅಲ್ಲವೇ ಎಂದು ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಪ್ರಶ್ನಿಸಿದರು.
ಹೋರಾಟಗಾರ್ತಿಯರಾದ ಜ್ಯೋತಿ ಎಸ್., ವಿಮಲಾ ಕೆ.ಎಸ್., ದಸಂಸ ಮುಖಂಡ ಮಾವಳ್ಳಿ ಶಂಕರ್, ಲೇಖಕ ಜಾಣಗೆರೆ ವೆಂಕಟರಾಮಯ್ಯ, ವಕೀಲ ಸೂರ್ಯ ಮುಕುಂದರಾಜ್, ಸೇರಿದಂತೆ ಹಲವರು ಮಾತನಾಡಿದರು.
ಈ ಹೋರಾಟವು ಧರ್ಮ ದೇವರು ಅಥವಾ ದೇವಾಲಯದ ವಿರುದ್ಧ ಅಲ್ಲ. ಅಲ್ಲಿ ನಡೆದ ಅತ್ಯಾಚಾರ ದೌರ್ಜನ್ಯದ ವಿರುದ್ಧ. ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಧರ್ಮಾಧಿಕಾರಿಯ ಮೇಲಿದೆಎಸ್.ಜಿ. ಸಿದ್ದರಾಮಯ್ಯ ಸಾಹಿತಿ
ಧರ್ಮಸ್ಥಳದಲ್ಲಿ ಜೈನರಿಗೂ ದೇವರಿಗೂ ಭಕ್ತರಿಗೂ ಸಂಬಂಧವೇ ಇಲ್ಲ. ಉಸ್ತುವಾರಿಯಷ್ಟೇ ನೋಡಿಕೊಂಡು ಆದಾಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಪೂಜೆ ಕೂಡ ಮಾಡುವುದಿಲ್ಲಮೂಡ್ನಾಕೂಡು ಚಿನ್ನಸ್ವಾಮಿ ಕವಿ
ಅನ್ಯಾಯದ ವಿರುದ್ಧ ಹೋರಾಡಿದರೆ ಧರ್ಮದ ವಿರುದ್ಧ ಪಿತೂರಿ ಎಂದು ಸುಳ್ಳು ಆರೋಪಿಸಿ ಹೊರಿಸಿ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಮತಾಂಧರು ಮಾತ್ರ ಎಸ್ಐಟಿಯನ್ನು ವಿರೋಧಿಸುತ್ತಿದ್ದಾರೆಸಿದ್ದನಗೌಡ ಪಾಟೀಲ ಲೇಖಕ
ಕಮ್ಯುನಿಸ್ಟರು ಧರ್ಮಸ್ಥಳದಲ್ಲಿ ಸಂವಿಧಾನ ಪ್ರಜಾಪ್ರಭುತ್ವದ ಕುರಿತು ಜಾಗೃತಿ ಮೂಡಿಸಲು ಓಡಾಡಿದ್ದಕ್ಕೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಾರೆಕೆ. ನೀಲಾ ಹೋರಾಟಗಾರ್ತಿ
ಮುಸುಕುಧಾರಿ ಭೀಮ ಆಗಿರುವಾಗ ಸತ್ಯ ಹೇಳಿದ್ದ. ಚಿನ್ನಯ್ಯನಾದ ಮೇಲೆ ಸುಳ್ಳು ಹೇಳತೊಡಗಿದ ಎಂದು ವಕೀಲ ಎಸ್. ಬಾಲನ್ ತಿಳಿಸಿದರು. ಚಿನ್ನಯ್ಯ ಬದಲಾಗಲು ಯಾರು ಕಾರಣ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಗಿರೀಶ್ ಮಟ್ಟಣ್ಣವರ್ ಆಗ್ರಹಿಸಿದರು.
ಧರ್ಮಸ್ಥಳ: ಎಸ್ಐಟಿ ಮುಂದುವರೆಸಲು ತೀರ್ಮಾನ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಎಸ್ಐಟಿ ತನಿಖೆಯನ್ನು ಮುಂದುವರೆಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
‘ಎಸ್ಐಟಿ ತನಿಖೆಯನ್ನು ನಿಲ್ಲಿಸಲಾಗುತ್ತದೆ’ ಎಂದು ಕೆಲವು ಸುದ್ದಿವಾಹಿನಿಗಳಲ್ಲಿ ವರದಿ ಪ್ರಸಾರವಾಗಿರುವ ಬಗ್ಗೆ ಸಂಪುಟದಲ್ಲಿ ಅನೌಪಚಾರಿಕವಾಗಿ ಚರ್ಚೆ ನಡೆಯಿತು. ‘ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಈ ಹಂತದಲ್ಲಿ ಎಸ್ಐಟಿ ನಿಲ್ಲಿಸುವುದು ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಸರ್ಕಾರದ ಮೇಲೆಯೂ ಅನುಮಾನಗಳಿಗೆ ಕಾರಣವಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.