ADVERTISEMENT

ಬಡ್ತಿ ಸಿಗದ ಹಿನ್ನೆಲೆ: ಎಡಿಜಿಪಿ ರವೀಂದ್ರನಾಥ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 13:02 IST
Last Updated 29 ಅಕ್ಟೋಬರ್ 2020, 13:02 IST
ಎಡಿಜಿಪಿ ರವೀಂದ್ರನಾಥ್‌
ಎಡಿಜಿಪಿ ರವೀಂದ್ರನಾಥ್‌   

ಬೆಂಗಳೂರು: ತಮಗೆ ಬಡ್ತಿ ನೀಡಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ರವೀಂದ್ರನಾಥ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸುನೀಲ್‌ ಕುಮಾರ್‌ ಅವರಿಗೆ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಹುದ್ದೆಗೆ ಬಡ್ತಿ ನೀಡಿರುವ ಬೆನ್ನಲ್ಲೇ ರವೀಂದ್ರನಾಥ್‌ ಬುಧವಾರ ರಾತ್ರಿ ಡಿ.ಜಿ ಕಚೇರಿಯ ಕಂಟ್ರೋಲ್‌ ರೂಂಗೆ ತೆರಳಿ ರಾಜೀನಾಮೆ ಪತ್ರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರವೀಂದ್ರನಾಥ್ ಮತ್ತು ಸುನೀಲ್‌ ಕುಮಾರ್ ಒಂದೇ ಬ್ಯಾಚ್‌ನ (1989)ಐಪಿಎಸ್‌ ಅಧಿಕಾರಿಗಳು. ಆದರೆ, ರ್‍ಯಾಂಕಿಂಗ್‌ನಲ್ಲಿ ರವೀಂದ್ರನಾಥ್‌ ಅವರು ಕೊಂಚ ಮೇಲಿದ್ದಾರೆ. ಆದರೆ, ತಮ್ಮ ಹಿರಿತನ ಪರಿಗಣಿಸಿಲ್ಲ ಎಂದು ಅವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ರವೀಂದ್ರನಾಥ್‌ ಕೆಲವು ಪ್ರಕರಣಗಳಲ್ಲಿ ಇಲಾಖಾ ತನಿಖೆಯನ್ನು ಎದುರಿಸುತ್ತಿದ್ದರು. ಆ ವಿಚಾರಣಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇತ್ತೀಚೆಗೆ ನೀಡಲಾಗಿತ್ತು. ಬಡ್ತಿಯ ವೇಳೆಯಲ್ಲಿ ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬಡ್ತಿಗೆ ಜೇಷ್ಠತೆ ಮಾತ್ರ ಮಾನದಂಡವಾಗಿರುವುದಿಲ್ಲ. ಅದರ ಜತೆಗೆ ವೃತ್ತಿ ಜೀವನವನ್ನೂ ಪರಿಗಣಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರವೀಂದ್ರನಾಥ್, ‘ನಿನ್ನೆ ರಾತ್ರಿ ರಾಜೀನಾಮೆ ನೀಡಿದ್ದೇನೆ. ಡಿಜಿಪಿ ಹುದ್ದೆಗೆ ನನಗಿಂತ ಕಿರಿಯರಾದ ಸುನೀಲ್‌ ಕುಮಾರ್‌ ಅವರಿಗೆ ಬಡ್ತಿ ನೀಡಲಾಗಿದೆ. ನನ್ನ ಹಿರಿತನ ಪರಿಗಣಿಸಿಲ್ಲ. ಈ ವಿಷಯವನ್ನು ಸರ್ಕಾರದ ಮುಖ್ಯಕಾರ್ಯದರ್ಶಿಯವರ ಗಮನಕ್ಕೂ ತಂದಿದ್ದೇನೆ’ ಎಂದು ಹೇಳಿದ್ದಾರೆ.

2014 ರಲ್ಲಿ ನನ್ನ ಮೇಲೆ ಆಪಾದನೆಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದರು. ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ವಜಾ ಮಾಡಿತ್ತು. ಸದ್ಯಕ್ಕೆ ಯಾವುದೇ ಪ್ರಕರಣಗಳ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ರಾಜೀನಾಮೆ ಪತ್ರ ಹಿಂಪಡೆಯುವಂತೆ ರವೀಂದ್ರನಾಥ್‌ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.