ಬೆಂಗಳೂರು: ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬೆವರು ಹರಿಸುತ್ತಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಶಾಸಕರ ಕೋಪ ತಣಿಸಲು ಮಲೇಷ್ಯಾಕ್ಕೆ ಕರೆದೊಯ್ಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಪಕ್ಷದ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಅತೃಪ್ತ ಶಾಸಕರ ಸಭೆ ನಡೆಯಬೇಕಿತ್ತು. ಕೊನೆಯ ಕ್ಷಣದಲ್ಲಿ ಅದು ಮುಂದಕ್ಕೆ ಹೋಗಿತ್ತು. ಈ ನಡುವೆ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡು ರಾಜ್ಯಕ್ಕೆ ಮರಳಿದ್ದರಿಂದ ಗಮನವೆಲ್ಲ ಅವರತ್ತವೇ ಕೇಂದ್ರೀಕೃತವಾಗಿತ್ತು. ಡಿಕೆಶಿ ‘ಹವಾ’ ತಣ್ಣಗಾಗುತ್ತಲೇ ಮತ್ತೆ ಜೆಡಿಎಸ್ ಶಾಸಕರ ಅತೃಪ್ತಿಯ ಕಾವು ಏರತೊಡಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಮಲೇಷ್ಯಾಕ್ಕೆ ಶಾಸಕರನ್ನು ಕರೆದೊಯ್ಯುವ ಕುರಿತು ಪ್ರಶ್ನಿಸಲು ಕುಮಾರಸ್ವಾಮಿ ಅವರನ್ನು ಸಂಪರ್ಕಿಸಲು ನಡೆಸಿದ ಯತ್ನ ಫಲಿಸಲಿಲ್ಲ. ಪಕ್ಷದ ಇತರ ಕೆಲವು ನಾಯಕರನ್ನು ಸಂಪರ್ಕಿಸಿದಾಗ ಇದನ್ನು ದೃಢಪಡಿಸಲು ಸಾಧ್ಯವಿಲ್ಲ ಎಂಬ ಮಾತು ಕೇಳಿಬಂತು. ‘ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಂತೂ ನಿಜ’ ಎಂದು ಇನ್ನೊಬ್ಬ ಹಿರಿಯ ನಾಯಕರು ಹೇಳಿದರು.
ಬಿಜೆಪಿಯತ್ತ ಮೃದು ಧೋರಣೆ?: ಕುಮಾರಸ್ವಾಮಿ ಅವರು ದೀಪಾವಳಿಯ ಮುನ್ನಾ ದಿನ ಬೆಳಗಾವಿಯಲ್ಲಿ ಬಿಜೆಪಿ ಸರ್ಕಾರ ಬೀಳಲು ಬಿಡುವು
ದಿಲ್ಲ ಎಂದು ನೀಡಿರುವ ಹೇಳಿಕೆ ಬಹಳ ದೊಡ್ಡ ಕಾರ್ಯತಂತ್ರದ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ.ಅತೃಪ್ತ ಶಾಸಕರ ಮೂಗಿಗೆ ತುಪ್ಪಸವರಿದ ರೀತಿಯಲ್ಲಿ ಈ ಹೇಳಿಕೆ ಇದೆ ಎಂದೂ ರಾಜಕೀಯ ಪಂಡಿತರು ವ್ಯಾಖ್ಯಾನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.