ಬೆಂಗಳೂರು: ‘ರಸ್ತೆಗಳ ಕಳಪೆ ಕಾಮಗಾರಿಯಿಂದ ಗುಂಡಿಗಳಿಗೆ ಬಿದ್ದು ಜನ ಸಾವನಪ್ಪುತ್ತಿದ್ದರೆ, ಪ್ರತಿವರ್ಷ ಡಾಂಬರೀಕರಣ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಶೇ 40ರಷ್ಟು ಕಮಿಷನ್ ಪಡೆದು ಜನರನ್ನು ವಂಚಿಸುತ್ತಿದೆ’ ಎಂದು ಸಂಸದ ಡಿ ಕೆ. ಸುರೇಶ್ ಆರೋಪಿಸಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರಹಳ್ಳಿ, ಯಲಚೇನಹಳ್ಳಿ, ಕೋಣನಕುಂಟೆ ವ್ಯಾಪ್ತಿಯ ಕಾಂಗ್ರೆಸ್ ಸಮಿತಿ ಮತ್ತು ಆರ್.ಕೆ ರಮೇಶ್ ಅಭಿಮಾನಿ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಚಿತ ಸೀರೆ ವಿತರಣೆ, ಆರೋಗ್ಯ ಶಿಬಿರ, ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಬ್ಯಾಗ್ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
‘ಬಿಜೆಪಿ ಸರ್ಕಾರ ತೊಲಗುವವರೆಗೂ ಜನತೆಗೆ ನೆಮ್ಮದಿ, ಉತ್ತಮ ಜೀವನ ಸಾಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ₹450ಕ್ಕೆ ಸಿಗುತ್ತಿದ್ದ ಅಡುಗೆ ಅನಿಲ(ಸಿಲಿಂಡರ್)ಗೆ ಈಗ ₹1200 ಕೊಡಬೇಕು. ಪೆಟ್ರೋಲ್ ₹70 ರಿಂದ ₹110, ಡೀಸೆಲ್ ₹60ರಿಂದ ₹85ಕ್ಕೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟು ಮಾಡುವ ಮೂಲಕ ಜನರನ್ನು ಕಷ್ಟಕ್ಕೆ ನೂಕಿರುವ ಈ ಸರ್ಕಾರ ಶೀಘ್ರ ಪತನವಾಗಲಿದೆ’ ಎಂದು ಭವಿಷ್ಯ ನುಡಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್ ಮಾತನಾಡಿದರು. ಉತ್ತರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರ್, ಸುಬ್ರಮಣ್ಯಪುರ ಕಾಂಗ್ರೆಸ್ ಆರ್.ಶ್ರೀನಿವಾಸ್, ಯದುಕುಮಾರ್, ಉತ್ತರಹಳ್ಳಿ ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ಬೈರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.