
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಡಾ.ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ‘ಸಹಜ ಸಾವು’ ಎಂಬುದಾಗಿ ಬಿಂಬಿಸಿದ್ದ ಪ್ರಕರಣದಲ್ಲಿ ಆರೋಪಿ ಡಾ.ಜಿ.ಎಸ್.ಮಹೇಂದ್ರ ರೆಡ್ಡಿ ಅವರು ತನ್ನ ಗೆಳತಿಯ ಜತೆಗೆ ಮೊಬೈಲ್ನಲ್ಲಿ ಚಾಟಿಂಗ್ ನಡೆಸಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಆರೋಪಿ ಬಂಧನದ ಬಳಿಕ ಮೊಬೈಲ್ ಹಾಗೂ ಲ್ಯಾಪ್ಟಾಪ್ ವಶಕ್ಕೆ ಪಡೆದುಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್ಎಸ್ಎಲ್) ರವಾನೆ ಮಾಡಲಾಗಿತ್ತು. ಎಫ್ಎಸ್ಎಲ್ ತಜ್ಞರು ಪರಿಶೀಲನೆ ನಡೆಸಿ ವರದಿ ನೀಡಿದ್ದು, ಗೆಳತಿಯ ಜತೆಗೆ ಆರೋಪಿ ಚಾಟಿಂಗ್ ನಡೆಸಿರುವುದು ಪತ್ತೆಯಾಗಿದೆ.
ಪದೇ ಪದೇ ಚಾಟಿಂಗ್ ಮಾಡುತ್ತಿದ್ದಂತೆ ಬೇಸರಗೊಂಡಿದ್ದ ಸ್ನೇಹಿತೆ ಮಹೇಂದ್ರ ರೆಡ್ಡಿ ಅವರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಲೀಸ್ಟ್ಗೆ ಸೇರಿಸಿದ್ದರು. ಕೆಲವು ಬಾರಿ ಫೋನ್ ಪೇಯಲ್ಲೂ ಆರೋಪಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ.
‘ನಿನಗಾಗಿ ನನ್ನ ಪತ್ನಿಯನ್ನು ಕೊಲೆ ಮಾಡಿದ್ದೇನೆ’ ಎಂಬುದಾಗಿ ಆರೋಪಿ ಸಂದೇಶ ಕಳುಹಿಸಿರುವುದು ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಸಂಬಂಧ ಯುವತಿ ಕರೆಸಿ ವಿಚಾರಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.