ಬೆಂಗಳೂರು: ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಜೂಲಿ ಎಂಬ ಬೀದಿ ನಾಯಿ ಮೃತಪಟ್ಟಿದೆ ಎಂದು ಆರೋಪಿಸಿ ಪಶುವೈದ್ಯರು ಮತ್ತು ಸುಷ್ಮಾ ಎಂಟರ್ಪ್ರೈಸಸ್ ಎನ್ಜಿಒ ಸಂಸ್ಥೆಯ ವಿರುದ್ಧ ಪ್ರಾಣಿಗಳ ಹಕ್ಕುಗಳ ಹೋರಾಟಗಾರ್ತಿ ನೆವಿನಾ ಕಾಮತ್ ಅವರು ಬೈಯಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುಷ್ಮಾ ಎಂಟರ್ಪ್ರೈಸಸ್ನ ಸಂಸ್ಥಾಪಕರಾದ ಅರುಣಾ ರೆಡ್ಡಿ ಎಂಬುವರು ಬಿಬಿಎಂಪಿಯಿಂದ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವ ಗುತ್ತಿಗೆ ಪಡೆದಿದ್ದಾರೆ. ಕಗ್ಗದಾಸಪುರದ ಅಬ್ಬಯ್ಯರೆಡ್ಡಿ ಲೇಔಟ್ನ ಈ ನಾಯಿಯನ್ನು ಸಂತಾನಹರಣ ಚಿಕಿತ್ಸೆಗೆಂದು ತೆಗೆದುಕೊಂಡು ಹೋಗಿ, ಚಿಕಿತ್ಸೆ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಬಿಟ್ಟು ಹೋಗಿದ್ದರು.
‘ಪಶುವೈದ್ಯರ ಎಡವಟ್ಟಿನಿಂದ ಚಿಕಿತ್ಸೆ ನೀಡಿದ ಕೆಲವು ದಿನಗಳಲ್ಲೇ ನಾಯಿಯನ್ನು ಕಳೆದುಕೊಳ್ಳಬೇಕಾಯಿತು. ತೀರಾ ಅಸ್ವಸ್ಥಗೊಂಡಿದ್ದ ನಾಯಿಗೆ ನಿಂತುಕೊಳ್ಳಲು ಆಗುತ್ತಿರಲಿಲ್ಲ. ಆಹಾರ ಸೇವಿಸಲು ಕಷ್ಟಪಡುತ್ತಿತ್ತು. ಪಶು ವೈದ್ಯರು ಮತ್ತು ಅರುಣಾ ರೆಡ್ಡಿ ಅವರೇ ಇದಕ್ಕೆಲ್ಲ ಕಾರಣ’ ಎಂದು ನೆವಿನಾ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.