ADVERTISEMENT

ವೃದ್ಧ ದಂಪತಿ ಹತ್ಯೆ ಪ್ರಕರಣ: ಸೊಸೆಯ ತಮ್ಮನೇ ಆರೋಪಿ

ಚಾಕುವಿನಿಂದ ಚುಚ್ಚಿ ವೃದ್ಧ ದಂಪತಿ ಕೊಲೆ: ಬಂಧನ

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:43 IST
Last Updated 11 ಮೇ 2020, 19:43 IST
ಕೊಲೆಯಾದ ದಂಪತಿ
ಕೊಲೆಯಾದ ದಂಪತಿ   

ಬೆಂಗಳೂರು: ಜೆ.ಪಿ. ನಗರ ಏಳನೇ ಹಂತದ ಆರ್‌ಬಿಐ ಲೇಔಟ್‌ನಲ್ಲಿ ವೃದ್ಧ ದಂಪತಿಯನ್ನು ಭಾನುವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಕೋಣನಕುಂಟೆ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.

ಬಿ.ಜಿ. ಗೋವಿಂದಯ್ಯ (65) ಮತ್ತು ಶಾಂತಮ್ಮ (58) ದಂಪತಿ ಕೊಲೆಯಾದವರು. ಆವಲಹಳ್ಳಿಯ ಡಿ. ರಾಕೇಶ್‌ ಆಲಿಯಾಸ್‌ ರಾಕ್ಸ್ (25) ಬಂಧಿತ ಆರೋಪಿ.

ದಂಪತಿಯ ಪುತ್ರ ನವೀನ್ ಕೊಲೆ ಮಾಡಿರಬಹುದೆಂಬ ಅನುಮಾನ ಮೊದಲು ವ್ಯಕ್ತವಾಗಿತ್ತು. ಆದರೆ, ನವೀನ್‌ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಆತನ ಪತ್ನಿಯ ತಮ್ಮ, ರಾಕೇಶ್‌ನನ್ನು ಬಂಧಿಸಿದ್ದಾರೆ.

ADVERTISEMENT

‘ನಾನು 2008ರಲ್ಲಿ ಪವಿತ್ರಾ ಎಂಬಾಕೆಯನ್ನು ಮದುವೆಯಾಗಿದ್ದೆ. ಆದರೆ, ಸಂಸಾರದಲ್ಲಿ ಹೊಂದಾಣಿಕೆ
ಯಾಗದ ಕಾರಣ ಆಕೆ ನನ್ನಿಂದ ದೂರವಾಗಿದ್ದಳು. ಕೌಟುಂಬಿಕ ನ್ಯಾಯಾಲಯದಲ್ಲಿ ಆಪ್ತ ಸಮಾಲೋಚನೆ ಬಳಿಕ ಮತ್ತೆ ಒಂದಾಗಿದ್ದೆವು. ಆದರೆ, ಅಂದಿನಿಂದ ಪತ್ನಿಯ ತಮ್ಮ ರಾಕೇಶ್, ನಮ್ಮ ಮೇಲೆ ದ್ವೇಷ ಹೊಂದಿದ್ದ’ ಎಂದು ದೂರಿನಲ್ಲಿ ನವೀನ್ ಆರೋಪಿಸಿದ್ದರು.

‘ಭಾನುವಾರ ಸಂಜೆ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದು ಬಿಡುವಂತೆ ರಾಕೇಶ್‌ಗೆ ಕರೆ ಮಾಡಿದ್ದೆ. ಆ ವೇಳೆ ನಮ್ಮಿಬ್ಬರ ಮಧ್ಯೆ ಮಾತಿನ ವಾಗ್ವಾದ ನಡೆದಿತ್ತು. ಆಗ ರಾಕೇಶ್, ‘ನಾನು ಈಗ ನಿಮ್ಮ ಮನೆಗೆ ಬಂದು ಏನು ಮಾಡುತ್ತೇನೆಂದು ನೋಡಿ’ ಎಂದು ಬೆದರಿಸಿದ್ದ. ನಾನು ಸಂಜೆ 7.30ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದೆ. ರಾತ್ರಿ 7.30ರಿಂದ 8.45ರ ಮಧ್ಯೆ ಮನೆಗೆ ಬಂದಾಗ ಘಟನೆ ನಡೆದಿರುವುದು ಗೊತ್ತಾಗಿದೆ’ ಎಂದೂ ದೂರಿದ್ದರು.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸೆಫಟ್‌ ಅವರು ಎಸಿಪಿ ಮಂಜುನಾಥ ಬಾಬು ನೇತೃತ್ವದಲ್ಲಿ ಕೋಣನಕುಂಟೆ ಇನ್‌ಸ್ಪೆಕ್ಟರ್‌ ಟಿ.ಎಂ. ಧರ್ಮೇಂದ್ರ ನೇತೃತ್ವದಲ್ಲಿ ವಿಶೇಷ ತಂಡ
ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.