ADVERTISEMENT

ಬಡವರಿಗಾಗಿ ಸ್ವಯಂಚಾಲಿತ ನೀರಿನ ಘಟಕ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 14:42 IST
Last Updated 1 ಜುಲೈ 2019, 14:42 IST
ನೀರಿನ ಘಟಕ ಉದ್ಘಾಟನೆ
ನೀರಿನ ಘಟಕ ಉದ್ಘಾಟನೆ   

ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನ ಪಕ್ಕದಲ್ಲಿ ನಿರ್ಮಿಸಿರುವ ಸ್ವಯಂಚಾಲಿತ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಮತ್ತು ಶಾಸಕಿ ಆರ್. ಸೌಮ್ಯಾ ರೆಡ್ಡಿ, ಪಾಲಿಕೆ ಸದಸ್ಯರಾದ ಎನ್.ನಾಗರಾಜ್ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ 500 ಬಿಪಿಎಲ್‌ ಕಾರ್ಡ್‌ದಾರರಿಗೆ ಎಟಿಎಂ ಮಾದರಿ ಕಾರ್ಡ್‌ಗಳನ್ನು ವಿತರಿಸಲಾಯಿತು. ಈ ಕಾರ್ಡ್‌ ಹೊಂದಿರುವವರ ಪ್ರತಿದಿನ 25ಲೀಟರ್‌ ಶುದ್ಧ ನೀರು ಪಡೆಯಬಹುದು. ಕಾರ್ಡ್‌ ಸ್ವೈಪ್‌ ಮಾಡಿ ನೀರು ತೆಗೆದುಕೊಂಡು ಹೋಗಬಹುದು. ನೀರಿನ ಕ್ಯಾನ್‌ಗಳನ್ನು ಸಹ ವಿತರಿಸಲಾಯಿತು. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಘಟಕ ತೆರೆದಿರುತ್ತದೆ.

‘ಬೆಂಗಳೂರಿನಲ್ಲಿ ಶುದ್ಧ ನೀರು ಸಿಗುವುದೇ ಕಷ್ಟವಾಗಿದೆ. ಹೆಚ್ಚಿನ ಕಾಯಿಲೆಗಳು ನೀರಿನಿಂದಲೇ ಹರಡುತ್ತವೆ. ಶುದ್ಧ ನೀರನ್ನು ಕೊಟ್ಟರೆ ಕಾಯಿಲೆಗಳನ್ನೂ ತಡೆಗಟ್ಟುವುದು ಸುಲಭ. ಸಿಬ್ಬಂದಿ ನೇಮಿಸುವ ಬದಲು ಈ ರೀತಿಯ ಸ್ವಯಂಚಾಲಿತ ಘಟಕಗಳು ಇದ್ದರೆ ಎಲ್ಲರಿಗೂ ಅನುಕೂಲ. ಇಲ್ಲಿನ ಕೊಳೆಗೇರಿ ನಿವಾಸಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಈ ಘಟಕ ನೆರವಾಗಲಿದೆ’ ಎಂದು ಮೇಯರ್‌ ಹೇಳಿದರು.

ADVERTISEMENT

‘ಕ್ಷೇತ್ರದಲ್ಲಿ ಇದು ಎರಡನೇ ಘಟಕವಾಗಿದೆ. ವಾರ್ಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಳೆಗೇರಿ ನಿವಾಸಿಗಳು ವಾಸಿಸುತ್ತಾರೆ. ಇವರನ್ನು ಗಮನದಲ್ಲಿಟ್ಟುಕೊಂಡು ಘಟಕ ಆರಂಭಿಸಲಾಗಿದೆ. ಮಧ್ಯಮ ವರ್ಗದ ಜನರಿಗೆ ಕೂಡ ಶುದ್ಧ ನೀರು ದೊರೆಯುತ್ತಿಲ್ಲ. ಎಲ್ಲರಿಗೂ ಶುದ್ಧ ನೀರು ಸಿಗಬೇಕು ಎಂಬುದು ನಮ್ಮ ಉದ್ದೇಶ. ₹ 600 ನೀಡಿ ಕಾರ್ಡುಗಳನ್ನು ಪಡೆಯಬಹುದು. ಮತ್ತೆ ಕಾರ್ಡುಗಳನ್ನು
ರೀ ಚಾರ್ಜ್ ಮಾಡಿಕೊಳ್ಳಬಹುದು’ ಎಂದು ಪಾಲಿಕೆ ಸದಸ್ಯ ಎನ್. ನಾಗರಾಜು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.