ಬೆಂಗಳೂರು: ಪಂತರಪಾಳ್ಯದ ಟೆಲಿಕಾಂ ಲೇಔಟ್ನಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡು, ಮಾದಕ ವಸ್ತು ಮಾರುತ್ತಿದ್ದ ರಾಜಸ್ಥಾನದ ಬೇರಾರಾಮ್ (32) ಎಂಬಾತ ಕೆಂಪಾಪುರ ಪೊಲೀಸರ ಅತಿಥಿಯಾಗಿದ್ದಾನೆ.
ಹತ್ತು ವರ್ಷಗಳಿಂದ ನಗರದಲ್ಲಿ ನೆಲೆಸಿರುವ ಬೇರಾರಾಮ್, ರಾಜಸ್ಥಾನದಿಂದ ಅಫೀಮು ತರಿಸಿಕೊಂಡು ಪರಿಚಿತ ಯುವಕರಿಗೆ ಮಾರುತ್ತಿದ್ದ. ಆತನಿಂದ ₹ 3 ಲಕ್ಷ ಮೌಲ್ಯದ 750 ಗ್ರಾಂ ಅಫೀಮು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ಮೈಸೂರು ರಸ್ತೆಯ ಕೆಲ ಶಾಲಾ–ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಭೆಗಳನ್ನು ನಡೆಸಲಾಗಿತ್ತು. ಈ ಸಂಬಂಧ ಕಿರುಹೊತ್ತಿಗೆಗಳನ್ನೂ ಹಂಚಲಾಗಿತ್ತು. ‘ಟೆಲಿಕಾಂ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ಪಾತ್ರೆ ಅಂಗಡಿಯಲ್ಲೇ ಅಫೀಮು ಮಾರುತ್ತಿದ್ದಾನೆ’ ಎಂದು ಯುವಕನೊಬ್ಬ ಸಭೆಯಲ್ಲೇ ದೂರು ಕೊಟ್ಟ. ಅದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಪ್ರಾರಂಭಿಸಿದೆವು’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಅ.14ರ ರಾತ್ರಿ 8 ಗಂಟೆ ಸುಮಾರಿಗೆ ಬೇರಾರಾಮ್, ಬಿ.ಎಂ.ವ್ಯಾಲಿ ಹೈಸ್ಕೂಲ್ ಹತ್ತಿರ ನಿಂತಿದ್ದ. ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಾಗ ಜೇಬಿನಲ್ಲಿ 50 ಗ್ರಾಂ ಅಫೀಮು ಸಿಕ್ಕಿತು. ಬಳಿಕ ಅಂಗಡಿ ಕರೆದೊಯ್ದು ಪರಿಶೀಲನೆ ನಡೆಸಿದಾಗ ಇನ್ನೂ 700 ಗ್ರಾಂ ಅಫೀಮು ಪತ್ತೆಯಾಯಿತು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.