ADVERTISEMENT

ಬಾಂಗ್ಲಾ ಗಡಿಯಿಂದ ಡ್ರಗ್ಸ್ ತರುತ್ತಿದ್ದ ಆರೋಪಿ

ದುಶ್ಚಟಗಳಿಗೆ ಹಣ ಹೊಂದಿಸಲು ಮಾದಕವಸ್ತು ಮಾರಾಟಕ್ಕಿಳಿದರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 21:04 IST
Last Updated 7 ಡಿಸೆಂಬರ್ 2020, 21:04 IST
ಆರೋಪಿಯಿಂದ ಜಪ್ತಿ ಮಾಡಲಾದ ಡ್ರಗ್ಸ್ ಹಾಗೂ ಗೊಂಬೆ
ಆರೋಪಿಯಿಂದ ಜಪ್ತಿ ಮಾಡಲಾದ ಡ್ರಗ್ಸ್ ಹಾಗೂ ಗೊಂಬೆ   

ಬೆಂಗಳೂರು: ಗೊಂಬೆಯಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸುತ್ತಿದ್ದ ಆರೋ‍ಪದಡಿ ಬಂಧಿಸಲಾಗಿರುವ ಸಾಕೀರ್ ಹುಸೇನ್ ಚೌಧರಿ (34), ಬಾಂಗ್ಲಾದೇಶದ ಗಡಿಯಿಂದ ಡ್ರಗ್ಸ್ ತರುತ್ತಿದ್ದ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.

‘ವೃತ್ತಿಯಲ್ಲಿ ಚಾಲಕರಾಗಿದ್ದ ಸಾಕೀರ್ ಹುಸೇನ್, ಅಸ್ಸಾಂನ ಹೈಲಾಗಂದಿ ಜಿಲ್ಲೆಯ ನಿವಾಸಿ. 5 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಲಾಕ್‌ಡೌನ್‌ನಿಂದಾಗಿ ಕೆಲಸ ಕಡಿಮೆ ಆಗಿತ್ತು. ತಮ್ಮ ದುಶ್ಚಟಗಳಿಗೆ ಹಣ ಸಾಕಾಗಿರಲಿಲ್ಲ. ಅದೇ ಕಾರಣಕ್ಕೆ ಡ್ರಗ್ಸ್ ಮಾರಾಟ ಮಾಡಲಾರಂಭಿಸಿದ್ದರು’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪತ್ನಿ ಹಾಗೂ ಮಕ್ಕಳ ಜೊತೆಯಲ್ಲಿ ಪ್ರವಾಸದ ನೆಪದಲ್ಲಿ ಬಾಂಗ್ಲಾದೇಶದ ಗಡಿಗೆ ಹೋಗುತ್ತಿದ್ದ
ಆರೋಪಿ, ಅಲ್ಲಿಯೇ ಪೆಡ್ಲರ್‌ಗಳಿಂದ ಡ್ರಗ್ಸ್ಖರೀದಿಸುತ್ತಿದ್ದರು. ನಂತರ,ತಮ್ಮೂರಿಗೆ ಹೋಗುತ್ತಿದ್ದರು. ಬಳಿಕ ಗೊಂಬೆ ಹಾಗೂ ಆಟಿಕೆ ಸಾಮಗ್ರಿಗಳಲ್ಲಿ ಡ್ರಗ್ಸ್ ಬಚ್ಚಿಟ್ಟುಕೊಂಡು ಬೆಂಗಳೂರಿಗೆ ಬರುತ್ತಿದ್ದರು. ಪೊಲೀಸರು ಯಾರಾದರೂ ತಡೆದರೆ, ತಾವು ಪ್ರವಾಸಕ್ಕೆ ಹೊರಟಿರುವುದಾಗಿ ಸುಳ್ಳು ಹೇಳುತ್ತಿದ್ದರು’ ಎಂದೂ ಹೇಳಿದರು.

ADVERTISEMENT

‘ಡಿ. 3ರಂದು ಸಂಜೆಹಳೇ ಮದ್ರಾಸ್ ರಸ್ತೆಯ ಎಂ.ವಿ.ಗಾರ್ಡನ್ ಬಳಿ ಆರೋಪಿ ಕಾರನ್ನು ಪೊಲೀಸರು ತಡೆದು ತಪಾಸಣೆ ನಡೆಸಿದ್ದರು. ಅವಾಗಲೇ ಆರೋಪಿ ಸಿಕ್ಕಿಬಿದ್ದಿದ್ದಾರೆ. ಅವರಿಂದ ₹ 28 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.’

‘ತಮ್ಮ ಮನೆಯಲ್ಲಿ ಡ್ರಗ್ಸ್ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ ಆರೋಪಿ, ಕೆಲ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರುತ್ತಿದ್ದರು’ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.