ಬೆಂಗಳೂರು: ನಗರದಲ್ಲಿ ಶುಕ್ರವಾರ ಮದ್ಯದ ಅಮಲಿನಲ್ಲೇ ಚಾಲಕರೊಬ್ಬರು ಪ್ರಾಣ ಬಿಟ್ಟಿದ್ದಾರೆ. ರೌಡಿಯೊಬ್ಬನ ಕೊಲೆ ಆಗಿದೆ.
ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯ ಲಕ್ಷ್ಮಿಪುರ ತೋಟದಲ್ಲಿ ಚಾಲಕ ಮುರಳಿ (33) ಎಂಬುವರು ಮೃತಪಟ್ಟಿದ್ದಾರೆ. ಅವರು ಕುಡಿದಿದ್ದ ಮದ್ಯ ಕಳಪೆಯಾಗಿತ್ತೆಂಬ ಅನುಮಾನವಿದೆ. ಅದನ್ನು ಅವರು ಎಲ್ಲಿಂದ ತಂದಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ದಿವಂಗತ ವೈ. ಕೃಷ್ಣಪ್ಪ ಎಂಬುವರ ತೋಟಕ್ಕೆ ಹೋಗಿದ್ದ ಮುರಳಿ, ಅಲ್ಲಿಯೇ ಮದ್ಯ ಕುಡಿದಿದ್ದರು. ಅದೇ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ಬಿದ್ದು ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.
‘ಮೃತದೇಹವಿದ್ದ ಸ್ಥಳದಲ್ಲಿ ಮದ್ಯದ ಬಾಟಲಿ ಸಿಕ್ಕಿದೆ. ಕಡಿಮೆ ಬೆಲೆಗೆ ಸಿಗುವ ಮದ್ಯ ಇದಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಮದ್ಯದ ಸೇವನೆಯಿಂದ ಸಾವು ಸಂಭವಿಸಿದೆಯಾ? ಅಥವಾ ಬೇರೆ ಏನಾದರೂ ಕಾರಣ ಇತ್ತಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದರು.
ರೌಡಿ ದಡಿಯಾ ಕೊಲೆ: ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಮದ್ಯದ ಪಾರ್ಟಿ ವೇಳೆಯೇ ರೌಡಿ ಶೀಟರ್ ಅಶೋಕ ಅಲಿಯಾಸ್ ದಡಿಯಾ ಎಂಬಾತನನ್ನು ಕೊಲೆ ಮಾಡಲಾಗಿದೆ.
‘ಸ್ಥಳೀಯ ನಿವಾಸಿಯಾದ ಅಶೋಕ ಹಾಗೂ ಸ್ನೇಹಿತರು, ಭಾರತಿ ನಗರದಲ್ಲಿ ಮದ್ಯ ಪಾರ್ಟಿ ಆಯೋಜಿಸಿದ್ದರು. ಮದ್ಯ ಕುಡಿದ ನಂತರ, ವೈಯುಕ್ತಿಕ ವಿಚಾರವಾಗಿ ಜಗಳ ಶುರುವಾಗಿತ್ತು. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸ್ನೇಹಿತರೇ ದಡಿಯಾನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.