ADVERTISEMENT

ಡಿವಿಎಸ್‌ ಚುನಾವಣಾ ಕಚೇರಿ ಉದ್ಘಾಟನೆ

ಮುನಿಸು ತೋರಿದ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:54 IST
Last Updated 15 ಮಾರ್ಚ್ 2019, 19:54 IST
   

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರ ಚುನಾವಣಾ ಕಚೇರಿ ಯಶವಂತಪುರದ ಮೇವಾರ್‌ ಭವನದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು. ಇದೇ ವೇಳೆ, ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮುನಿಸು ತೋರಿದರು.

ಕಾರ್ಯಾಲಯದ ಉದ್ಘಾಟನೆ ವೇಳೆ ಡಿವಿಎಸ್‌ ದಂಪತಿ ಪೂಜೆ ನೆರವೇರಿಸಿದರು. ‘ಕಳೆದ ಬಾರಿಗಿಂತ ಹೆಚ್ಚು ಅಂತರದಿಂದ ಗೆಲುವು ಸಾಧಿಸಬೇಕು ಎಂಬುದು ನಮ್ಮ ಉದ್ದೇಶ. ನಾವು ಹೇಳದೆ ಕೇಳದೆ ಇವತ್ತು ಸಾವಿರಾರು ಕಾರ್ಯಕರ್ತರು ಬಂದಿದ್ದಾರೆ. ಇದರಿಂದ ವಿಶ್ವಾಸ ಹೆಚ್ಚಾಗಿದೆ’ ಎಂದು ಸದಾನಂದ ಗೌಡ ಹೇಳಿದರು.

‘ನಾನು ಈಗಾಗಲೇ 5 ವಿಧಾನಸಭಾ ಕ್ಷೇತ್ರಗಳ 18 ಸಾವಿರ ಕಾರ್ಯಕರ್ತರನ್ನು ಭೇಟಿ ಮಾಡಿದ್ದೇನೆ. ಉಳಿದ ಮೂರು ಕ್ಷೇತ್ರಗಳ ಕಾರ್ಯಕರ್ತರ ಭೇಟಿಯನ್ನು ಕೆಲವು ದಿನಗಳಲ್ಲಿ ಪೂರ್ಣಗೊಳಿಸುತ್ತೇನೆ. ಕಾರ್ಯಕರ್ತರೇ ನಮ್ಮ ಶಕ್ತಿ. ಬಳಿಕ ಮುಂದಿನ ಹೆಜ್ಜೆ ಇಡಲಿದ್ದೇನೆ’ ಎಂದರು.

ADVERTISEMENT

‘ನನ್ನ ಎದುರಾಳಿ ಯಾರು ಎಂಬ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ 2.30 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೆ. ಈ ಸಲ ಅದಕ್ಕಿಂತ ಹೆಚ್ಚು ಅಂತರದಿಂದ ಜಯಭೇರಿ ಬಾರಿಸುವುದು ಹೇಗೆ ಎಂಬ ಕುರಿತು ತಲೆಕೆಡಿಸಿಕೊಂಡಿದ್ದೇನೆ’ ಎಂದರು.

ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಬಿಬಿಎಂಪಿಯ ಮಾಜಿ ಸದಸ್ಯರಾದ ಶರವಣ ಹಾಗೂ ಗೋಪಿ ಅವರನ್ನು ಬಿಜೆಪಿಗೆ ಮತ್ತೆ ಸೇರಿಸಿಕೊಳ್ಳಲು ಸಂಸದ ಪಿ.ಸಿ.ಮೋಹನ್‌ ಹಾಗೂ ಶಾಸಕ ಆರ್‌.ಅಶೋಕ್‌ ಸಿದ್ಧತೆ ನಡೆಸಿದ್ದರು. ಕಳೆದ ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದರು.

ಇದಕ್ಕೆ ಕಟ್ಟಾ ಆಕ್ಷೇಪ ವ್ಯಕ್ತಪಡಿಸಿದ್ದರು. ‘ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಔಚಿತ್ಯ ಏನಿದೆ’ ಎಂದು ಪ್ರಶ್ನಿಸಿದ್ದರು. ಶುಕ್ರವಾರ ನಡೆದ ಪೂಜಾ ಕಾ‌ರ್ಯಕ್ರಮದ ವೇಳೆ ಶಾಸಕ ವಿ.ಸೋಮಣ್ಣ ವೇದಿಕೆಗೆ ಬರುವಂತೆ ವಿನಂತಿಸಿದರು. ಕಟ್ಟಾ ಅವರು ಸ್ಥಳದಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.