ADVERTISEMENT

ಗ್ರಹಣದ ವೇಳೆ ಹಣ್ಣು, ಉಪಾಹಾರ ಸೇವಿಸಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 20:31 IST
Last Updated 25 ಅಕ್ಟೋಬರ್ 2022, 20:31 IST
ನಗರದಲ್ಲಿ ಮೂಢನಂಬಿಕೆ ವಿರೋಧಿ ಒಕ್ಕೂಟ ಮಂಗಳವಾರ ಹಮ್ಮಿಕೊಂಡಿದ್ದ ‘ವೈಜ್ಞಾನಿಕ ಮನೋಧರ್ಮದೊಂದಿಗೆ ಸೂರ್ಯಗ್ರಹಣ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಆಹಾರ ಸೇವಿಸಿದರು   –ಪ್ರಜಾವಾಣಿ ಚಿತ್ರ.
ನಗರದಲ್ಲಿ ಮೂಢನಂಬಿಕೆ ವಿರೋಧಿ ಒಕ್ಕೂಟ ಮಂಗಳವಾರ ಹಮ್ಮಿಕೊಂಡಿದ್ದ ‘ವೈಜ್ಞಾನಿಕ ಮನೋಧರ್ಮದೊಂದಿಗೆ ಸೂರ್ಯಗ್ರಹಣ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಆಹಾರ ಸೇವಿಸಿದರು –ಪ್ರಜಾವಾಣಿ ಚಿತ್ರ.   

ಬೆಂಗಳೂರು: ಸಮಾಜದಲ್ಲಿ ಬೇರು ಬಿಟ್ಟಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಜನರಲ್ಲಿ ವೈಜ್ಞಾನಿಕ ತಿಳಿವಳಿಕೆ ಮೂಡಿಸುವುದೇ ಸೂಕ್ತ ಪರಿಹಾರ ಎಂದು ನಿವೃತ್ತ ಐಪಿಎಸ್‌ಅಧಿಕಾರಿ ಸುಭಾಷ್‌ ಭರಣಿ ಹೇಳಿದರು.

ಮೂಢನಂಬಿಕೆ ವಿರೋಧಿ ಒಕ್ಕೂಟ ಇಲ್ಲಿನ ಟೌನ್‌ಹಾಲ್ ಎದುರು ಮಂಗಳವಾರ ಹಮ್ಮಿಕೊಂಡಿದ್ದ ‘ವೈಜ್ಞಾನಿಕ ಮನೋಧರ್ಮದೊಂ
ದಿಗೆ ಪಾರ್ಶ್ವಸೂರ್ಯಗ್ರಹಣ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಸೂರ್ಯನ ಹುಟ್ಟು, ಭೂಮಿಯ ಪರಿಭ್ರಮಣೆ, ತಾರಾ ಪುಂಜ, ಹುಣ್ಣಿಮೆ, ಅಮಾವಾಸ್ಯೆ, ಗ್ರಹಣಗಳ ಕುರಿತು ಜನರಲ್ಲಿ ಮೂಢ ನಂಬಿಕೆಗಳೇ ತುಂಬಿದ್ದವು. ಖಗೋಳ ವಿಜ್ಞಾನಿಗಳು ಕಾಲಕಾಲಕ್ಕೆ ವೈಜ್ಞಾನಿಕ ಸತ್ಯಗಳನ್ನು ಅನಾವರಣ ಮಾಡುತ್ತಾ ಬಂದರು. ಇಂದು ಸಾಕಷ್ಟು ಜನರು ವೈಜ್ಞಾನಿಕ ಮನೋಭಾವ ಹೊಂದಿದ್ದಾರೆ. ಆದರೂ ಈ ಆಧುನಿಕ ಕಾಲಘಟ್ಟದಲ್ಲಿ ಮೌಢ್ಯ ನೆಲೆಸಿರುವುದು ವಿಪರ್ಯಾಸ. ಶಿಕ್ಷಣ, ಸೂಕ್ತ ಅರಿವಿನ ಮೂಲಕ ಜನರಲ್ಲಿ ನಂಬಿಕೆ ಮೂಡಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ADVERTISEMENT

ದಲಿತ ಸಂಘರ್ಷ ಸಮಿತಿ ಮುಖಂಡ ಬಿ.ಗೋಪಾಲ್‌,ಸಮಾಜದಲ್ಲಿ ಮೌಢ್ಯ ಬಿತ್ತುವ ಜೋತಿಷಿಗಳಿಗೆ ಮಾಧ್ಯಮಗಳು ಅವಕಾಶ ನೀಡಬಾರದು. ಅಂತಹ ಕಾರ್ಯಕ್ರಮಗಳ ಪ್ರಸಾರ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಸಾವಿರಾರು ವರ್ಷಗಳಿಂದ ದೇವಸ್ಥಾನಗಳಿವೆ. ದಲಿತರಿಗೆ, ಹಿಂದುಳಿದವರಿಗೆ ಅವುಗಳ ಗರ್ಭಗುಡಿಗೆ ಬಿಟ್ಟುಕೊಂಡಿಲ್ಲ. ಜ್ಯೋತಿಬಾ ಫುಲೆ ಅವರು ಮೊದಲ ಬಾರಿಗೆ ದಲಿತರಲ್ಲಿ ಮೂಢ ನಂಬಿಕೆ ವಿರುದ್ಧ ಜಾಗೃತಿ ಮೂಡಿಸಿದರು. ವೈಜ್ಞಾನಿಕ ಚಿಂತನೆಗೆ ಜನರನ್ನು ತೆರೆದುಕೊಳ್ಳುವಂತೆ ಮಾಡಲು ಶಿಕ್ಷಣಕ್ಕೆ ಒತ್ತು ನೀಡಿದರು. ಅಂಬೇಡ್ಕರ್ ಅಂತಹ ಜಾಗೃತಿಯನ್ನು ವಿಸ್ತರಿಸಿದರು ಎಂದು ಸ್ಮರಿಸಿದರು.

ಗ್ರಹಣದ ಸಮಯದಲ್ಲಿ ಜನರಿಗೆ ಹಣ್ಣು, ಆಹಾರ ಹಂಚುವ ಮೂಲಕ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಿದರು.ಮುಖಂಡರಾದ ಮಾವಳ್ಳಿ ಶಂಕರ್, ನಾಡಗೌಡ, ಪುರುಷೋತ್ತಮದಾಸ್‌, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.