ADVERTISEMENT

ಆರ್ಥಿಕ ಪ್ಯಾಕೇಜ್‌: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ಆನ್‌ಲೈನ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 9:49 IST
Last Updated 3 ಜೂನ್ 2021, 9:49 IST
ಮಹಿಳೆಯಿಂದ ಆನ್‌ಲೈನ್‌ ಪ್ರತಿಭಟನೆ
ಮಹಿಳೆಯಿಂದ ಆನ್‌ಲೈನ್‌ ಪ್ರತಿಭಟನೆ   

ಬೆಂಗಳೂರು: ‘ಕೋವಿಡ್‌ನಿಂದ ತೀವ್ರ ಸಂಕಷ್ಟದಲ್ಲಿರುವ ಖಾಸಗಿ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರಿಗೆ ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು’ ಎಂದು ಆಗ್ರಹಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವತಿಯಿಂದ ಗುರುವಾರ ಆನ್‍ಲೈನ್ ಪ್ರತಿಭಟನೆ ನಡೆಯಿತು.

ಬೇಡಿಕೆಗಳನ್ನು ಈಡೇರಿಸುವಂತೆ ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮ ಮನೆಯಲ್ಲೇ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಆನ್‍ಲೈನ್ ಚಳುವಳಿಯಲ್ಲಿ ಭಾಗವಹಿಸಿದರು.

‘ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ, ಉಪನ್ಯಾಸಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು, ಉದ್ಯೋಗದಿಂದ ವಜಾಗೊಳಿಸದಂತೆ ಮತ್ತು ವೇತನ ಕಡಿತ ಮಾಡದಂತೆ ಆದೇಶ ಹೊರಡಿಸಿ, ಅದು ಜಾರಿ ಆಗುವಂತೆ ನೋಡಿಕೊಳ್ಳಬೇಕು’ ಎಂದು ಸರ್ಕಾರವನ್ನು ಪ್ರತಿಭಟನೆನಿರತರು ಆಗ್ರಹಿಸಿದರು.

ADVERTISEMENT

‘ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ ಶಿಕ್ಷಕ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರೂ ಗೌರವದಿಂದ ಬದುಕು ಸಾಗಿಸುತ್ತಿದ್ದ ಈ ವರ್ಗಕ್ಕೆ ಅನಿಶ್ಚಿತತೆ ಆವರಿಸಿದೆ. 14 ತಿಂಗಳುಗಳಿಂದ ಸಂಬಳ ಇಲ್ಲದೆ, ಬೇರೆ ಉದ್ಯೋಗವೂ ಇಲ್ಲದೆ ಚಿಂತಾಜನಕ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ. ಕೆಲವರು ತರಕಾರಿ, ಹಣ್ಣು ಮಾರುವ ಮತ್ತು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುದ ದಯನೀಯ ಪರಿಸ್ಥಿತಿ ಬಂದಿದೆ. ಕೆಲವರು ಆರ್ಥಿಕ ಹೊರೆ ತಾಳಲಾಗದೆ, ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ’ ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

‘ಶಾಲಾ –ಕಾಲೇಜುಗಳು ನಡೆಯುತ್ತಿಲ್ಲವೆಂಬ ನೆಪವೊಡ್ಡಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಡೊನೇಷನ್ ಬಂದಿಲ್ಲವೆಂದು ಫೆಬ್ರವರಿ ತಿಂಗಳಿನಿಂದ ನೀಡಬೇಕಾದ ಸಂಬಳವನ್ನೂ ನೀಡಿಲ್ಲ. ಕೆಲಸದಿಂದ ತೆಗೆದುಹಾಕಬಾರದೆಂದು ಸರ್ಕಾರ ಹೇಳಿದ್ದರೂ, ಅದಕ್ಕೆ ಸಂಸ್ಥೆಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ.ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕದಂತೆ ಸರ್ಕಾರ ತಕ್ಷಣ ಸ್ಪಷ್ಟ ಆದೇಶ ಹೊರಡಿಸಬೇಕು. ಈ ಆದೇಶವನ್ನು ಉಲ್ಲಂಘಿಸದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.