ಬೆಂಗಳೂರು: ‘ನಾನು ಶಿಕ್ಷಣದ ರಸ್ತೆಯಲ್ಲಿ ಸಾಗುತ್ತಿರುವ ಭಿಕ್ಷುಕ. ಬಟ್ಟಲು ಹಿಡಿದು ಹೊರಟಿರುವೆ. ಎಷ್ಟು ದೂರ ಸಾಗಿದರೂ ಬಟ್ಟಲು ತುಂಬುತ್ತಿಲ್ಲ. ಹಾಗಂತ ನಾನು ಸುಮ್ಮನೆ ಕೂರುವುದಿಲ್ಲ’
–ಇದು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರ ಮನದಾಳದ ಮಾತುಗಳು. ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಒಡನಾಟದಿಂದ ಸಾಕಷ್ಟು ಹೊಸ ವಿಷಯ ತಿಳಿಯಲು ಸಹಾಯವಾಯಿತು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
‘ಬಾಲ್ಯದಲ್ಲಿ ಗುರುಗಳು ಕಲಿಸಿದ ಉಪನಿಷತ್ತು ಹಾಗೂ ವಿಜ್ಞಾನ ನನ್ನ ಕೈಹಿಡಿಯಿತು. ಅಕ್ಕ ನನಗಿಂತ ಆರೂವರೆ ವರ್ಷ ದೊಡ್ಡವಳು. ತಾಯಿಯ ಪ್ರೀತಿಯನ್ನು ನೀಡಿದಳು. ಅಕ್ಕನ ಮಾರ್ಗದರ್ಶನದಿಂದ 21ನೇ ವರ್ಷಕ್ಕೆ ನಾನು ಉಪನ್ಯಾಸಕನಾಗಿ ಸೇವೆ ಆರಂಭಿಸಿದೆ. ಅಷ್ಟೇ ಅಲ್ಲ, 25ನೇ ವರ್ಷದಲ್ಲಿ ಪ್ರಾಂಶುಪಾಲನಾದೆ’ ಎಂದು ತಿಳಿಸಿದರು.
‘ಬೆಂಗಳೂರಿಗೆ ಬಂದಾಗ ಬಿಡುವಿನ ವೇಳೆಯಲ್ಲಿ ಜಿ.ಪಿ.ರಾಜರತ್ನಂ ಅವರ ಮನೆಗೆ ಹೋಗುತ್ತಿದ್ದೆ. ಅವರೇ ಪಾಲಿ ಭಾಷೆಯನ್ನು ಕಲಿಸಿ, ಬುದ್ಧನ ಕಥೆಗಳನ್ನು ಅನುವಾದಿಸುವಂತೆ ಸೂಚಿಸಿದರು. ಆ ಕಥೆಗಳು ‘ಸುಧಾ’ದಲ್ಲಿ ಪ್ರಕಟವಾದವು. ಬರವಣಿಗೆಯ ವಿಧಾನವನ್ನು ಮಾಸ್ತಿ ಅವರಿಂದ ತಿಳಿದುಕೊಂಡೆ’ ಎಂದರು.
‘ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜತೆಗೆ ಕೂಡ ಒಡನಾಟ ಹೊಂದಿದ್ದೆ. ಕಲಾಂ ಅವರು ರಾಜ್ಯಕ್ಕೆ ಬಂದಾಗ ಅವರ ಭಾಷಣವನ್ನು ಕನ್ನಡಕ್ಕೆ ನಾನೇ ಅನುವಾದ ಮಾಡುತ್ತಿದ್ದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.