ಬೆಂಗಳೂರು: ಚುನಾವಣೆ ತರಬೇತಿ ಪಡೆಯುವ ಕೇಂದ್ರದಲ್ಲಿ ಉದ್ಧಟತನ ಹಾಗೂ ಬೇಜವಾಬ್ದಾರಿ ತೋರಿದ ಮಾಪನಶಾಸ್ತ್ರ ಇಲಾಖೆಯ ನಿರೀಕ್ಷಕಿ ಭವ್ಯ ಎಸ್.ಎಸ್. ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಭಾಗವಹಿಸಬೇಕಿದ್ದ ಭವ್ಯ ಹಾಜರಾಗಿ, ಹಿಂದಿನ ಸಾಲಿನಲ್ಲಿ ದಿನಪತ್ರಿಕೆ ಓದುವುದರಲ್ಲಿ ನಿರತರಾಗಿದ್ದರು.
ಆ ಸಮಯದಲ್ಲಿ ಎಂಸಿಸಿ ನೋಡಲ್ ಅಧಿಕಾರಿ ಮತ್ತು ಸೆಕ್ಟರ್ ಅಧಿಕಾರಿಗಳು ಪ್ರಶ್ನಿಸಿದಾಗ, ‘ನಾನು ಮಾಡುತ್ತಿರುವುದು ಸರಿ. ತರಬೇತಿ ಕೊಡುವುದು ನಿಮ್ಮ ಕೆಲಸ. ತರಬೇತಿ ಪಡೆಯುವುದು ಬಿಡುವುದು ನನಗೆ ಬಿಟ್ಟಿದ್ದು. ನೀವು ಹೇಳಿದೆಲ್ಲವನ್ನು ಕೇಳುವುದಕ್ಕೆ ನನ್ನನ್ನು ಪ್ರಶ್ನಿಸುವ ಅಧಿಕಾರ ನಿಮಗಿರುವುದಿಲ್ಲ. ನನ್ನ ಕೆಲಸ ನನಗೆ ಗೊತ್ತಿದೆ. ನಿಮ್ಮ ಕೆಲಸ ನೀವು ಮಾಡಿ, ನಾನು ನಿಮ್ಮ ಇಲಾಖೆ ನೌಕರಳಲ್ಲ. ನಿಮ್ಮ ಎಲ್ಲ ವಿಷಯಗಳನ್ನು ಕೇಳಲು, ಪಾಲಿಸಲು ಆಗುವುದಿಲ್ಲ. ಈ ರೀತಿ ತರಬೇತಿ ಉಪಯೋಗಕ್ಕೆ ಬಾರದು. ನೀವು ಏನು ಬೇಕಾದರೂ ಮಾಡಿಕೊಳ್ಳಿ. ಯಾರಿಗಾದರೂ ವರದಿ ಮಾಡಿ. ನನಗೇನೂ ಮಾಡಲಾಗುವುದಿಲ್ಲ’ ಎಂದು ಉದ್ಧಟನದಿಂದ ವರ್ತಿಸಿದ್ದಾರೆ.
ಈ ವರ್ತನೆ ಸರ್ಕಾರಿ ನೌಕರರಿಗೆ ತರವಲ್ಲದ್ದಾಗಿದ್ದು, ರಾಷ್ಟ್ರೀಯ ಕಾರ್ಯಕ್ರಮದಂತಹ ಚುನಾವಣೆ ಕಾರ್ಯಕ್ಕೆ ಅಡಚಣೆ ಉಂಟು ಮಾಡಿರುವುದನ್ನು ಉದ್ಧಟನ ಹಾಗೂ ಬೇಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಭವ್ಯ ಅವರನ್ನು ಮೇ 8ರಿಂದ ಜಾರಿಯಾಗುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.