ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬಳಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜುಲೈ 1ರಿಂದ 6 ರವರೆಗೆ ‘ಇವಿ’ ಅಭಿಯಾನ ಹಮ್ಮಿಕೊಂಡಿದೆ.
ಈ ಅಭಿಯಾನದ ಭಾಗವಾಗಿ ಬೆಸ್ಕಾಂ ಜುಲೈ 1ರಿಂದ ಜುಲೈ 3ರವರೆಗೆ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದಲ್ಲಿ ಇವಿ ಎಕ್ಸ್ಪೋ ಆಯೋಜಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಇವಿ ಅಭಿಯಾನ ಮತ್ತು ಇವಿಎಕ್ಸ್ಪೋ’ ಉದ್ಘಾಟಿಸಲಿದ್ದಾರೆ. ಇಂಧನ ಸಚಿವ ವಿ. ಸುನಿಲ್ ಕುಮಾರ್, ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ಭಗವಂತ ಖೂಬಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
250ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರ ಗಳ ಆರಂಭಕ್ಕೆ ಮುಖ್ಯಮಂತ್ರಿ ಅವರು ಚಾಲನೆ ನೀಡಲಿದ್ದಾರೆ. ಬೆಸ್ಕಾಂನ ‘ಇವಿ’ ಮಿತ್ರ ಆ್ಯಪ್, ಚಾರ್ಜಿಂಗ್ ಸ್ಟೇಷನ್ ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಏಕ ಗವಾಕ್ಷಿಯಲ್ಲಿ ಅನುಮತಿ ಪಡೆದ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ.
‘ಇವಿ’ ಅಭಿಯಾನದ ಅಂಗವಾಗಿ ಜುಲೈ 2ರಂದು ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ವಿದ್ಯುತ್ ವಾಹನಗಳ ರ್ಯಾಲಿಆಯೋಜಿಸಲಾಗಿದೆ. ವಿಧಾನಸೌಧದಿಂದ ಅರಮನೆ ಮೈದಾನದವರೆಗೆ ವಿದ್ಯುತ್ ವಾಹನಗಳ ರ್ಯಾಲಿ ಸಾಗಲಿವೆ.
ವಿದ್ಯುತ್ ಚಾಲಿತ ವಾಹನಗಳ ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಪರಸ್ಪರ ಸಮನ್ವಯ ಸಾಧಿಸಲು ಇವಿ ಎಕ್ಸ್ಪೋ ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇವಿ ಎಕ್ಸ್ಪೋ ವಿವರ: ಉತ್ಪಾದಕರು, ಪೂರೈಕೆದಾರರು ಮತ್ತು ಬಳಕೆದಾರರಿಗೆ ಸಮಗ್ರ ಮಾಹಿತಿ ನೀಡುವ ಸಲುವಾಗಿ ‘ಇವಿಎಕ್ಸ್ಪೋ’ ಹಮ್ಮಿಕೊಳ್ಳಲಾಗಿದೆ. ಎಲೆಕ್ಟ್ರಿಕಲ್ ವಾಹನಗಳ ಉತ್ತೇಜನಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳು ಮತ್ತು ನೀತಿಗಳ ಕುರಿತು ಮಾಹಿತಿ ಒದಗಿಸುವುದು ಸಹ ಈ ‘ಎಕ್ಸ್ಪೋ’ ಮುಖ್ಯ ಉದ್ದೇಶವಾಗಿದೆ.
‘ಇವಿ ಎಕ್ಸ್ಪೋ’ಗೆ ಸಾರ್ವಜನಿಕಗೆ ಮುಕ್ತ ಅವಕಾಶವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.