ಬೆಂಗಳೂರು: ರಾಮನಗರದಿಂದ ಆನೆ ದಂತ ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಇಬ್ಬರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ರಾಮನಗರ ಜಿಲ್ಲೆಯ ಮಾದಿಗೊಂಡನಹಳ್ಳಿಯ ಸಿ. ಲೋಕೇಶ್ (44) ಹಾಗೂ ಮಂಜುನಾಥ್ ಪೂಜಾರಿ (28) ಬಂಧಿತರು. ಅವರಿಂದ ಆನೆಗಳ ಮೂರು ದಂತಗಳನ್ನು ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿ ಕೃಷ್ಣ ಎಂಬಾತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿ ಲೋಕೇಶ್, ಆಟೊ ಚಾಲಕ. ಆತನಿಗೆ, ರಾಮನಗರ ನಿವಾಸಿ ಕೃಷ್ಣನ ಪರಿಚಯವಾಗಿತ್ತು. ದಂತಗಳನ್ನು ₹5 ಲಕ್ಷಕ್ಕೆ ಮಾರಾಟ ಮಾಡಿಕೊಡುವಂತೆ ಕೃಷ್ಣ ಕೋರಿದ್ದ. ಅದಕ್ಕೆ ಕಮಿಷನ್ ನೀಡುವುದಾಗಿಯೂ ತಿಳಿಸಿದ್ದ. ಆತನ ಮಾತಿಗೆ ಒಪ್ಪಿದ್ದ ಲೋಕೇಶ್, ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಜೊತೆ ಸೇರಿ ದಂತ ಮಾರಾಟ ಮಾಡಲು ನಗರಕ್ಕೆ ಬಂದಿದ್ದ’ ಎಂದೂ ತಿಳಿಸಿದರು.
‘ಶುಕ್ರವಾರ ಬೆಳಿಗ್ಗೆ 10ರ ಸುಮಾರಿಗೆ ಬಾಗಲಗುಂಟೆ ಎಂಇಐ ಲೇಔಟ್ ಮೈದಾನ ಬಳಿ ಆರೋಪಿಗಳು ನಿಂತುಕೊಂಡಿದ್ದರು. ಅನುಮಾನಗೊಂಡಿದ್ದ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಿಕ್ಕಿಬಿದ್ದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.