ಬೆಂಗಳೂರು: ದಕ್ಷಿಣ ವಲಯದಲ್ಲಿ ಮುಚ್ಚಿದ್ದ 11 ಇಂದಿರಾ ಕ್ಯಾಂಟೀನ್ಗಳು ಜುಲೈ 19ರಂದು
ಪುನರಾರಂಭಗೊಂಡಿವೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಶ್ ಕಿಶೋರ್ ತಿಳಿಸಿದ್ದಾರೆ.
ಗುತ್ತಿಗೆದಾರರು ಕ್ಯಾಂಟೀನ್ಗಳನ್ನು ಪುನರಾರಂಭ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಮುಚ್ಚುವುದು ಪುನರಾವರ್ತನೆಗೊಂಡಲ್ಲಿ ಕಾನೂನು ರೀತಿ ಕ್ರಮಕೈಗೊಂಡು, ಪರ್ಯಾಯವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಸಂಸ್ಥೆಯವರಿಗೆ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.
‘ಗುತ್ತಿಗೆ ಪಡೆದಿರುವ ಸಂಸ್ಥೆಯು ಸಲ್ಲಿಸಿರುವ ಬಿಲ್ಲುಗಳಲ್ಲಿ ಬಾಕಿ ಮೊತ್ತ ಅಂದಾಜು ₹40 ಕೋಟಿ ಪಾವತಿಸದಿರುವುದರಿಂದ, ನೀರು ಹಾಗೂ ವಿದ್ಯುತ್ ಬಿಲ್ ಪಾವತಿಸಿಲ್ಲ. ಅದರ ಸಂಪರ್ಕ ಕಡಿತಗೊಂಡಿದೆ. 2021ರ ನವೆಂಬರ್ರಿಂದ ಈವರೆಗೆ ಎಲ್ಲ ಇಂದಿರಾ ಕ್ಯಾಂಟೀನ್ಗಳಿಗೆ ಹಣ ಪಾವತಿ ಮಾಡಲಾಗಿದೆ. ಆದರೆ, ದಕ್ಷಿಣ ವಲಯದಲ್ಲಿ
ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಯವರು ಇಂದಿರಾ ಕ್ಯಾಂಟೀನ್ ಗಳಲ್ಲಿ ನಾಗರಿಕರಿಗೆ ಒದಗಿಸಿರುವ ಆಹಾರಕ್ಕಿಂತ ಹೆಚ್ಚಿನ ಮೊತ್ತದ ಬಿಲ್ ಸಲ್ಲಿಸಿರುವುದರಿಂದ ಅನುದಾನವನ್ನು ಕಡಿತಗೊಳಿಸಲಾಗಿರುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
‘ಗುತ್ತಿಗೆದಾರರ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯ ಪ್ರಕಾರ ನೀರು ಮತ್ತು ವಿದ್ಯುತ್ ಬಿಲ್ ಅನ್ನು ಸಂಬಂಧಪಟ್ಟ ಸಂಸ್ಥೆಯವರೇ ಪಾವತಿಸಬೇಕಾಗಿರುತ್ತದೆ. ಮುಖ್ಯ ಆರೋಗ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಸಂಸ್ಥೆಯವರ ಪ್ರತಿನಿಧಿ, ದಕ್ಷಿಣ ವಲಯ ಆರೋಗ್ಯಾಧಿಕಾರಿ ಗಳೊಂದಿಗೆ ಸಭೆ ನಡೆಸಲಾಗಿದೆ. 11 ಇಂದಿರಾ ಕ್ಯಾಂಟೀನ್ಗಳನ್ನು ಪುನರಾರಂಭಿಸುವಂತೆ ಸೂಚಿಸಲಾಗಿದೆ’ ಎಂದು ವಿಕಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.