ಬೆಂಗಳೂರು: ‘ಪದವಿ ಹಂತದಲ್ಲಿ ಕನ್ನಡ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ನೀಡಿದ ತಡೆಯಾಜ್ಞೆಯಿಂದ ಕನ್ನಡಿಗರಿಗೆ ಬರಸಿಡಿಲು ಬಡಿದಂತಾಗಿದೆ. ಈ ಕುರಿತು ಚರ್ಚಿಸಲು ತುರ್ತು ಅಧಿವೇಶನ ಕರೆಯಬೇಕು’ ಎಂದು ‘ಕನ್ನಡ ವಾಟಾಳ್’ ಪಕ್ಷದ ವಾಟಾಳ್ ನಾಗರಾಜ್ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನ್ಯಾಯಾಲಯದ ಮೇಲೆ ನಮಗೆ ಗೌರವ ಇದೆ. ಪದವಿಯಲ್ಲಿ ಕನ್ನಡ ಕಲಿಯಬಾರದು ಎನ್ನುವುದಾದರೆ ಮುಂದೆ ರಾಜ್ಯದ ಕನ್ನಡಿಗರ ಸ್ಥಿತಿ ಏನು. ಕನ್ನಡಿಗರ ಉದ್ಯೋಗ ಪರಿಸ್ಥಿತಿ ಏನು’ ಎಂದು ಅವರು ಪ್ರಶ್ನಿಸಿದರು.
‘ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡಕ್ಕೆ ಮಾನ್ಯತೆ, ಗೌರವ ಸಿಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ. ಈ ವಿಚಾರಕ್ಕೆ ವಿಶೇಷ ಅಧಿವೇಶನ ನಡೆದರೆ, ಅಲ್ಲಿ ಕನ್ನಡಕ್ಕೆ ಎಷ್ಟು ಶಕ್ತಿ ತುಂಬಬಹುದು, ಯಾವ ರೀತಿ ಕಾನೂನು ಮಾಡಬಹುದು ಎಂಬ ಕುರಿತು ಚರ್ಚಿಸಬಹುದು’ ಎಂದರು.
‘ಕನ್ನಡ ಕಡ್ಡಾಯಗೊಳಿಸುವ ವಿಚಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಪರಿಷತ್ತು,
ಗಡಿ ಅಭಿವೃದ್ಧಿ ಪ್ರಾಧಿಕಾರ ಗಂಭೀರ ಚಿಂತನೆ ನಡೆಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಿಂದ (ಎನ್ಇಪಿ) ಪ್ರಾದೇಶಿಕ ಭಾಷೆಗಳಿಗೆ ಸವಾಲು ಎದುರಾಗಲಿದೆ. ಭಾಷಾವಾರು ಪ್ರಾಂತ್ಯಗಳು ಈ ಬಗ್ಗೆ ಸಮಗ್ರ ಚರ್ಚೆ ಮಾಡಬೇಕು. ಎನ್ಇಪಿಯಲ್ಲಿ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.