ಬೆಂಗಳೂರು: ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಕೆರೆ, ಗೋಮಾಳ, ಸ್ಮಶಾನ, ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಜಿಲ್ಲಾಡಳಿತ, ಅಂದಾಜು ₹19.94 ಕೋಟಿ ಮೌಲ್ಯದ 17–31 ಎಕರೆ ಜಾಗವನ್ನು ವಶಕ್ಕೆ ಪಡೆದಿದೆ.
ಆನೇಕಲ್ ತಾಲ್ಲೂಕು ಅತ್ತಿಬೆಲೆ ಹೋಬಳಿ ಇಂಡ್ಲಬೆಲೆ ಗ್ರಾಮದ ಸರ್ಕಾರಿ ಗುಂಡುತೋಪಿನಲ್ಲಿ ಖಾಸಗಿಯವರು ನಿರ್ಮಿಸಿದ್ದ ಕಲ್ಯಾಣ ಮಂಟಪವನ್ನು ವಶಕ್ಕೆ ಪಡೆಯಲಾಗಿದೆ. ಅದಕ್ಕೆ ಅತ್ತಿಬೆಲೆ ನಾಡ ಕಚೇರಿ ಎಂದು ನಾಮಫಲಕ ಹಾಕಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಒಂದು ಕೆರೆಯ 20 ಗುಂಟೆ ಜಾಗ, ಯಲಹಂಕ ತಾಲ್ಲೂಕಿನ ಕೆರೆಯೊಂದರ 1–20 ಎಕರೆ ಜಾಗ, ದಕ್ಷಿಣ ತಾಲ್ಲೂಕಿನ ಮೂರು ಕೆರೆಗಳ 36 ಗುಂಟೆ, ಆನೇಕಲ್ ತಾಲ್ಲೂಕಿನಲ್ಲಿ ನಾಲ್ಕು ಕೆರೆಗಳ 6.24 ಎಕರೆ ಜಾಗ ವಶಕ್ಕೆಪಡೆಯಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ 14 ಗುಂಟೆ ಸರ್ಕಾರಿ ಖರಾಬು, 1–32 ಎಕರೆ ಸರ್ಕಾರಿ ಗೋಮಾಳ, 1 ಎಕರೆ ಗುಂಡುತೋಪು ವಶಕ್ಕೆ ಪಡೆಯಲಾಗಿದೆ. ಪೂರ್ವ ತಾಲ್ಲೂಕಿನಲ್ಲಿ 6 ಗುಂಟೆ ಸರ್ಕಾರಿ ಖರಾಬು, 9 ಗುಂಟೆ ಗೋಮಾಳ, 5 ಗುಂಟೆ ಗುಂಡುತೋಪು ಜಾಗ ವಶಕ್ಕೆ ಪಡೆಯಲಾಗಿದೆ. ಆನೇಕಲ್ ತಾಲ್ಲೂಕಿನಲ್ಲಿ 1–12 ಎಕರೆ ಕರಾಬು ಜಾಗ, ಸ್ಮಶಾನದ3 ಗುಂಟೆ ಜಾಗ ವಶಕ್ಕೆ ಪಡೆಯಲಾಗಿದೆ. ಯಲಹಂಕ ತಾಲ್ಲೂಕಿನಲ್ಲಿ 3 ಕಡೆ 4–01 ಎಕರೆ ಗುಂಡುತೋಪು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.