ನವದೆಹಲಿ: ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ ಅಮೃತಹಳ್ಳಿಯಲ್ಲಿ ರಾಜಕಾಲುವೆಯ ದಿಕ್ಕು ಬದಲಿಸಿ 4 ಎಕರೆ ಜಾಗ ಒತ್ತುವರಿ ಮಾಡಿರುವ ಪ್ರಕರಣದ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್ಜಿಟಿ) ಪ್ರಧಾನ ಪೀಠ ಶುಕ್ರವಾರ ನಿರ್ದೇಶನ ನೀಡಿದೆ.
ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದರ್ಶಕುಮಾರ್ ಗೋಯಲ್, ಸುಧೀರ್ ಅಗರವಾಲ್, ಎ.ಸೆಂಥಿಲ್ ವೆಲ್, ಡಾ.ಅಪ್ರೋಜ್ ಅಹ್ಮದ್ ಅವರನ್ನು ಒಳಗೊಂಡ ನ್ಯಾಯಪೀಠವು ಆದೇಶ ಹೊರಡಿಸಿದ್ದು, ಒಂದು ವೇಳೆ ಈ ಎರಡು ಪ್ರಾಧಿಕಾರಗಳು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪೀಠದ ಗಮನಕ್ಕೆ ತರಬಹುದು ಎಂದು ದೂರುದಾರರಿಗೆ ಸೂಚಿಸಿದೆ.
ಗ್ರಾಮದಲ್ಲಿ ಪ್ರೊಸ್ಪೆರೊ ರಿಯಾಲ್ಟಿ ಲಿಮಿಟೆಡ್ ಒತ್ತುವರಿ ಮಾಡಿದೆ ಎಂದು ಆರೋಪಿಸಿ ಸ್ಥಳೀಯರಾದ ಗಿರೀಶ್ ಚಂದಿರಮಣಿ ಹಾಗೂ ಇತರರು ಎನ್ಜಿಟಿಗೆ ಅಂಚೆ ಮೂಲಕ ದೂರು ನೀಡಿದ್ದರು. ಸರ್ವೆ ಸಂಖ್ಯೆ 18/1ರಲ್ಲಿ 34 ಗುಂಟೆ, 18/2ರಲ್ಲಿ 26 ಗುಂಟೆ, 18/3ರಲ್ಲಿ 20 ಗುಂಟೆ, 18/4ರಲ್ಲಿ 39 ಗುಂಟೆ, 18/5ರಲ್ಲಿ 17 ಗುಂಟೆ, ಸರ್ವೆ ಸಂಖ್ಯೆ 118/1ರಲ್ಲಿ 23.5 ಗುಂಟೆ ಒತ್ತುವರಿಯಾಗಿದೆ. ಈ ಮೂಲಕ ಪರಿಸರದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.