ಬೆಂಗಳೂರು: ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯಗಳಿಗೆ ಸಮಗ್ರ ಕಾಯಕಲ್ಪ ನೀಡಿ, ಆಧುನಿಕ ಸ್ವರೂಪ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
ಇದಕ್ಕಾಗಿ ಕೃಷಿ ಸಂಬಂಧಿತ ಎಲ್ಲ ವಿಶ್ವವಿದ್ಯಾಲಯಗಳನ್ನೂ ಅಧ್ಯಯನಕ್ಕೆ ಒಳಪಡಿಸಿ ವರದಿ ಪಡೆಯಲು ತಜ್ಞರನ್ನು ಒಳಗೊಂಡ ಮೌಲ್ಯಮಾಪನ ಸಮಿತಿ ರಚಿಸಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಕೃಷಿ ಮೇಳದ ಉದ್ಘಾಟನೆ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಿದರು.
ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಣೆ, ಮೂಲಸೌಕರ್ಯ, ಸಂಶೋಧನೆ ಮತ್ತು ಸುಸ್ಥಿರತೆ ಬಗ್ಗೆ ಮೌಲ್ಯಮಾಪನ ಆಗಬೇಕು ಎಂದರು.
ಮೇಳ ಉದ್ಘಾಟಿಸಿದ ರಾಜ್ಯಪಾಲ ವಜುಭಾಯಿ ವಾಲಾ, ಕೃಷಿಯ ಅನುಕೂಲಕ್ಕಾಗಿ ವಿದ್ಯುತ್ ಗ್ರಿಡ್ ಮಾದರಿಯಲ್ಲಿ ನದಿಗಳ ಗ್ರಿಡ್ ರೂಪಿಸಬೇಕು ಎಂದು ಸಲಹೆ ನೀಡಿದರು.
ರೈತರಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಯಲ್ಲಾಪುರ ತಾಲ್ಲೂಕಿನ ಪ್ರಸಾದ ರಾಮ ಹೆಗಡೆಯವರಿಗೆ ಎಂ.ಎಚ್.ಮರಿಗೌಡ ರಾಜ್ಯ ಮಟ್ಟದ ತೋಟಗಾರಿಕಾ ರೈತ ಪ್ರಶಸ್ತಿ, ಹಾಸನ ತಾಲ್ಲೂಕಿನ ಹೇಮ ಅನಂತ್ ಅವರಿಗೆ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತಮಹಿಳೆ ಪ್ರಶಸ್ತಿ ಮತ್ತು ಕೋಲಾರ ಜಿಲ್ಲೆ ಮದನಹಳ್ಳಿಯ ಎಂ.ಎನ್.ರವಿಶಂಕರ್ ಅವರಿಗೆ ಕ್ಯಾನ್ ಬ್ಯಾಂಕ್ ಅತ್ಯುತ್ತಮ ಪ್ರಶಸ್ತಿ ನೀಡಿ ರಾಜ್ಯಪಾಲರು ಗೌರವಿಸಿದರು.
*******
ಕೃಷಿ ವಿಜ್ಞಾನಿಗಳೇ ನೀವು ರೈತರ ಹೊಲಕ್ಕೆ ಹೋಗಿ, ಆಧುನಿಕ ಕೃಷಿ ವಿಧಾನಗಳನ್ನು ಪರಿಚಯಿಸಿ
– ವಜುಭಾಯಿ ವಾಲಾ, ರಾಜ್ಯಪಾಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.