ADVERTISEMENT

ಒಂದು ವಚನ ಪಾಲಿಸಿದರೂ ಬದುಕು ಸಾರ್ಥಕ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 22:06 IST
Last Updated 17 ನವೆಂಬರ್ 2021, 22:06 IST
ಬೆಂಗಳೂರಿನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರಿಗೆ ‘ರಮಣ ಶ್ರೀ ಜೀವಮಾನ ಸಾಧಕ’ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ನಿಟಕಪೂರ್ವ ಅಧ್ಯಕ್ಷ ಮನು ಬಳಿಗಾರ, ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ, ಅವರ ಮಗ ವೀರೇಂದ್ರ ಷಡಕ್ಷರಿ ಇದ್ದರು
ಬೆಂಗಳೂರಿನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರಿಗೆ ‘ರಮಣ ಶ್ರೀ ಜೀವಮಾನ ಸಾಧಕ’ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ನಿಟಕಪೂರ್ವ ಅಧ್ಯಕ್ಷ ಮನು ಬಳಿಗಾರ, ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ, ಅವರ ಮಗ ವೀರೇಂದ್ರ ಷಡಕ್ಷರಿ ಇದ್ದರು   

ಬೆಂಗಳೂರು: ಆಚಾರ– ವಿಚಾರಗಳ ಕುರಿತು ಬಸವಾದಿ ಶರಣರು ರಚಿಸಿರುವ 21,000 ವಚನಗಳಲ್ಲಿ ಒಂದನ್ನು ಸಂಪೂರ್ಣವಾಗಿ ಪಾಲಿಸಿದರೂ ಜೀವನ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಬುಧವಾರ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಮಣಶ್ರೀ ಪ್ರಶಸ್ತಿ ಪ್ರದಾನ ಮತ್ತು ಎಸ್‌. ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿ ಮುತ್ತು–9’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಧಿಕಾರವನ್ನು ಪಿತ್ರಾರ್ಜಿತ ಆಸ್ತಿ ಎಂದು ಭಾವಿಸಿದವರೂ ಇದ್ದಾರೆ. ಕೈ ಎತ್ತಿ ನಮಸ್ಕರಿಸುವುದಕ್ಕೂ ಹಿಂದೇಟು ಹಾಕುವವರಿದಿದ್ದಾರೆ. ವಚನಗಳ ಬಳಕೆ ಭಾಷಣಗಳಿಗೆ ಸೀಮಿತವಾಗಬಾರದು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮೌಲ್ಯಯುತ ಬದುಕು ಸಾಧ್ಯವಾಗುತ್ತದೆ ಎಂದರು.

ADVERTISEMENT

ಬಸವಣ್ಣನವರ ಕಾಲದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ, ಲಿಂಗ ತಾರತಮ್ಯ, ಮೂಢನಂಬಿಕೆಗಳು ಈಗಲೂ ಇವೆ. ಈ ಕಾರಣಕ್ಕಾಗಿಯೇ ಬಸವಣ್ಣ ಇಂದಿಗೂ ಪ್ರಸ್ತುತ ಎಂಬ ಮಾತು ಚಾಲ್ತಿಯಲ್ಲಿ ಉಳಿದಿದೆ. ದಯೆಯೇ ಧರ್ಮದ ಮೂಲ ಮತ್ತು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಸಾಲುಗಳು ಜೀವನದ ಸಾರವನ್ನು ತಿಳಿಸುತ್ತವೆ ಎಂದು ಹೇಳಿದರು.

ಡಾ.ಗುರುರಾಜ ಕರಜಗಿ ಅವರಿಗೆ ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಶಾಂತಾ ಇಮ್ರಾಪೂರ (ಶರಣ ಸಾಹಿತ್ಯ ಸಂಶೋಧನೆ), ಡಾ.ಪ್ರದೀಪ ಕುಮಾರ್ ಹೆಬ್ರಿ (ಆಧುನಿಕ ವಚನ ರಚನೆ), ಮತ್ತು ಡಾ.ನಂದಾ ಪಾಟೀಲ (ವಚನ ಸಂಗೀತ) ಅವರಿಗೆ ರಮಣಶ್ರೀ ಹಿರಿಯ ಶ್ರೇಣಿ ಪ್ರಶಸ್ತಿ ಹಾಗೂ ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಗ್ರಾಮೀಣ ಆರೋಗ್ಯ ಕೇಂದ್ರದ ಜಪಾನಂದ ಸ್ವಾಮಿ ಸ್ವಾಮೀಜಿ ಅವರಿಗೆ ಶರಣ ಸಂಸ್ಕೃತಿ ಪ್ರಸಾರ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಜಿ.ಭಾಗ್ಯಮ್ಮ (ಶರಣ ಸಾಹಿತ್ಯ ಸಂಶೋಧನೆ), ಸ್ಮಿತಾರಾವ್ ಬೆಳ್ಳೂರ್ (ವಚನ ಸಂಗೀತ) ಅವರಿಗೆರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ಮತ್ತು ನಂಜನಗೂಡಿನ ಪತಂಜಲಿ ಯೋಗ ಶಿಕ್ಷಣ ಸಮಿತಿಗೆ ಶರಣ ಸಂಸ್ಕೃತಿ ಉತ್ತೇಜನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತಿ ಗೊ.ರು.ಚನ್ನಬಸಪ್ಪ, ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್‍ನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್, ಬಿಜೆಪಿ ಮುಖಂಡ ಅರುಣ್ ಸೋಮಣ್ಣ, ರಮಣ ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಷಡಕ್ಷರಿ, ವೀರೇಂದ್ರ ಷಡಕ್ಷರಿ, ಅರುಣಾ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.