ADVERTISEMENT

‘ಇವಿಎಂ ದುರ್ಬಳಕೆ ಪ್ರಜಾಪ್ರಭುತ್ವಕ್ಕೆ ಮಾರಕ’: ವೋಟ್ ಫಾರ್ ಡೆಮಾಕ್ರಸಿ ಸಂಸ್ಥೆ

ಪಾರದರ್ಶಕ ಚುನಾವಣಾ ವ್ಯವಸ್ಥೆಗೆ ‘ವೋಟ್ ಫಾರ್ ಡೆಮಾಕ್ರಸಿ’ ಸಂಸ್ಥೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 16:06 IST
Last Updated 16 ಆಗಸ್ಟ್ 2025, 16:06 IST
<div class="paragraphs"><p>‘ಚುನಾವಣಾ ಆಯೋಗದ ಆಯುಧೀಕರಣ: ವೋಟ್ ಫಾರ್ ಡೆಮಾಕ್ರಸಿ’ ಸಂಸ್ಥೆಯ ಸದಸ್ಯರೊಂದಿಗೆ ದುಂಡು ಮೇಜಿನ ಸಂವಾದದಲ್ಲಿ ಮಾಧವ್ ದೇಶಪಾಂಡೆ,&nbsp;ಎಂ.ಜಿ. ದೇವಸಹಾಯಂ, ತೀಸ್ತಾ ಸೆಟಲ್ವಾಡ್‌ ಉಪಸ್ಥಿತರಿದ್ದರು </p></div>

‘ಚುನಾವಣಾ ಆಯೋಗದ ಆಯುಧೀಕರಣ: ವೋಟ್ ಫಾರ್ ಡೆಮಾಕ್ರಸಿ’ ಸಂಸ್ಥೆಯ ಸದಸ್ಯರೊಂದಿಗೆ ದುಂಡು ಮೇಜಿನ ಸಂವಾದದಲ್ಲಿ ಮಾಧವ್ ದೇಶಪಾಂಡೆ, ಎಂ.ಜಿ. ದೇವಸಹಾಯಂ, ತೀಸ್ತಾ ಸೆಟಲ್ವಾಡ್‌ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ನ (ಇವಿಎಂ) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಮತಕಳವು ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಪಾರದರ್ಶಕ ಚುನಾವಣಾ ವ್ಯವಸ್ಥೆ ಜಾರಿಗೆ ತರುವ ಮೂಲಕ ಈ ಅಕ್ರಮವನ್ನು ತಡೆಗಟ್ಟಬೇಕು...’

ADVERTISEMENT

ಇದು ವೋಟ್ ಫಾರ್ ಡೆಮಾಕ್ರಸಿ ಸಂಸ್ಥೆಯ ಸದಸ್ಯರೊಂದಿಗೆ ‘ಎದ್ದೇಳು ಕರ್ನಾಟಕ‌’ ಸಂಘಟನೆ ಶನಿವಾರ ಆಯೋಜಿಸಿದ್ದ ದುಂಡುಮೇಜಿನ ಸಂವಾದದಲ್ಲಿ ಮೂಡಿ ಬಂದ ಅಭಿಪ್ರಾಯ.

ಚುನಾವಣಾ ಚಿಂತಕರಾದ ಎಂ.ಜಿ. ದೇವಸಹಾಯಂ, ಮಾಧವ್‌ ದೇಶಪಾಂಡೆ, ತೀಸ್ತಾ ಸೆಟಲ್ವಾಡ್‌ ವಿಚಾರ ಮಂಡಿಸಿದರು. ಮಹಾರಾಷ್ಟ್ರದಲ್ಲಿ ಹೇಗೆ ಮತ ಕಳವು ನಡೆದಿದೆ ಎಂಬುದರ ಅಂಕಿ– ಅಂಶಗಳನ್ನು ನೀಡಿದರು.

‘2024ರಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಸಂಜೆ 5 ಗಂಟೆಗೆ ಶೇ 58.22ರಷ್ಟು ಮತದಾನವಾಗಿತ್ತು. ಆದರೆ, ಶೇ 66.05ರಷ್ಟು ಮತದಾನವಾಗಿದೆ ಎಂದು ಮಧ್ಯರಾತ್ರಿ ಘೋಷಿಸಲಾಯಿತು. ಹೆಚ್ಚುವರಿಯಾಗಿ 48 ಲಕ್ಷ ಮತಗಳು ಎಲ್ಲಿಂದ ಸೇರ್ಪಡೆಯಾದವು’ ಎಂದು ಪ್ರಶ್ನಿಸಿದರು. 

‘ಮತ ಎಣಿಕೆ ನಡೆದಾಗ ಅಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು 3 ಸಾವಿರದ ಒಳಗಿನ ಮತಗಳ ಅಂತರದಿಂದ 25 ಕ್ಷೇತ್ರಗಳಲ್ಲಿ, 5,000 ಅಂತರದಲ್ಲಿ 39 ಕ್ಷೇತ್ರಗಳಲ್ಲಿ ಹಾಗೂ 10 ಸಾವಿರದೊಳಗಿನ ಅಂತರದಲ್ಲಿ 69 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಇದೆಲ್ಲ ಮತದಾನದ ದಿನದಂದು ರಾತ್ರೋರಾತ್ರಿ ಶೇ 7.83ರಷ್ಟು ಹೆಚ್ಚುವರಿ ಮತ ಸೇರ್ಪಡೆಯಿಂದ ಪಡೆದ ಗೆಲುವು’ ಎಂದು ಪ್ರತಿಪಾದಿಸಿದರು.

‘ಲೋಕಸಭೆ ಚುನಾವಣೆಗೆ ಹೋಲಿಸಿದರೆ, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮತದಾರರ ಸಂಖ್ಯೆ ಒಮ್ಮೆಲೇ ಹೇಗೆ ಹೆಚ್ಚಳವಾಯಿತು ಎಂಬುದರ ಬಗ್ಗೆ ಚುನಾವಣಾಧಿಕಾರಿ ಉತ್ತರಿಸಿಲ್ಲ. ಈಗ ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಲ್ಲಿ ಯಾರನ್ನು ಪಟ್ಟಿಯಿಂದ ಕಿತ್ತು ಹಾಕುತ್ತಿದ್ದಾರೆ ಎಂದು ಗಮನಿಸಿದರೆ ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ಆಯೋಗದ ಆಯುಧೀಕರಣ ಬಿಹಾರದಲ್ಲಿಯೂ ನಡೆಯಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬಿಜೆಪಿ ಮತ್ತು ಅದರ ಮೈತ್ರಿಯನ್ನು ಬೆಂಬಲಿಸದ ಸಮುದಾಯಗಳ ಮತದಾರರನ್ನೇ ಮತದಾರರ ಪಟ್ಟಿಯಿಂದ ಬಿಜೆಪಿ ತೆಗೆದು ಹಾಕುತ್ತಿದೆ’ ಎಂದು ಆರೋ‍ಪಿಸಿದರು.

‘ರಾಜ್ಯಗಳ ಚುನಾವಣೆಯನ್ನು ಆಯಾ ರಾಜ್ಯಗಳ ಚುನಾವಣಾ ಆಯೋಗವೇ ನಡೆಸಬೇಕು. ಇವಿಎಂ, ವಿವಿಪ್ಯಾಟ್‌ ಮತ್ತು ಮತದಾರರ ಪಟ್ಟಿಗಳನ್ನು ತಕ್ಷಣ ವಿಧಿವಿಜ್ಞಾನ ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕು. ಯಂತ್ರಗಳನ್ನು, ಅದರಲ್ಲಿರುವ ಓದಬಹುದಾದ ರೋಲ್‌ ಅನ್ನು, ಫಾರ್ಮ್‌ 17ಎ/17ಸಿಯನ್ನು ಹಾಗೂ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ನಿರ್ಬಂಧಿತ ನಿಯಮ 93ಕ್ಕೆ ತಿದ್ದುಪಡಿ ತರುವ ಮೂಲಕ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಮರುಸ್ಥಾಪಿಸಬೇಕು’ ಎಂದು ಬೇಡಿಕೆ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.