
ಎಫ್ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಲೋಕಾಯುಕ್ತರ ಹೆಸರಿನಲ್ಲಿ ಜಿಬಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗೆ (ಎಇಇ) ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಲೋಕಾಯುಕ್ತ ಇನ್ಸ್ಪೆಕ್ಟರ್ ಶ್ರೀನಿವಾಸ ದೊಡ್ಡಮನಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ರಾಜರಾಜೇಶ್ವರಿ ನಗರದ ಸರೋವರ ವಲಯದ ಜಿಬಿಎ ಎಇಇ ವೆಂಕಟೇಶ್ ಅವರ ಮೊಬೈಲ್ಗೆ ಆರೋಪಿ ಕರೆ ಮಾಡಿದ್ದ. ಆರೋಪಿ ಕರೆ ಮಾಡಿದ್ದ ಸಮಯದಲ್ಲಿ ವೆಂಕಟೇಶ್ ಅವರಿಗೆ ಕರೆ ಸ್ವೀಕರಿಸಲು ಸಾಧ್ಯ ಆಗಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಟ್ರೂಕಾಲರ್ನಲ್ಲಿ ಮೊಬೈಲ್ ಸಂಖ್ಯೆ ಪರಿಶೀಲಿಸಿದಾಗ ಲೋಕಾಯುಕ್ತ ಬಿ.ಎಸ್.ಪಾಟೀಲ ಮತ್ತು ಉಪ ಲೋಕಾಯುಕ್ತ ಫಣೀಂದ್ರ ಅವರ ಹೆಸರು ತೋರಿಸುತ್ತಿತ್ತು. ಜತೆಗೆ, ಪ್ರೊಫೈಲ್ನಲ್ಲಿ ಲೋಕಾಯುಕ್ತರ ಫೋಟೊ ಇರುವುದು ಕಂಡುಬಂದಿತ್ತು. ಅದಾದ ಮೇಲೆ ಪದೇ ಪದೇ ಸೈಬರ್ ವಂಚಕ ಕರೆ ಮಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅನುಮಾನಗೊಂಡ ವೆಂಕಟೇಶ್ ಅವರು, ಲೋಕಾಯುಕ್ತ ಕಚೇರಿಗೆ ಬಂದು ಮಾಹಿತಿ ನೀಡಿ ವಿಚಾರಿಸಿದ್ದರು. ಅದು ನಕಲಿ ನಂಬರ್ ಎಂಬುದು ಖಚಿತವಾಗಿತ್ತು. ಕೂಡಲೇ ವೆಂಕಟೇಶ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಶ್ರೀನಿವಾಸ ದೊಡ್ಡಮನಿ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.