ಜೈಲು
(ಪ್ರಾಧಿನಿಧಿಕ ಚಿತ್ರ)
ಬೆಂಗಳೂರು: ನಕಲಿ ನೋಟು ಚಲಾವಣೆ ಪ್ರಕರಣದಲ್ಲಿ ಅಪರಾಧಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಎನ್ಐಎ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಪಶ್ಚಿಮ ಬಂಗಾಳದ ಶರೀಫ್ ಉಲ್ಲಾ ಇಸ್ಲಾಂ ಅಲಿಯಾಸ್ ಶರೀಫ್ ಉದ್ದೀನ್ ಶಿಕ್ಷೆಗೆ ಗುರಿಯಾದ ಅಪರಾಧಿ.
2018ರಲ್ಲಿ ನಡೆದಿದ್ದ ಪ್ರಕರಣದ ತನಿಖೆಯನ್ನು ಎನ್ಐಎ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯವು ಆರೋಪಿಗೆ ಶಿಕ್ಷೆಯ ಜತೆಗೆ ₹5 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ನಕಲಿ ನೋಟು ಚಲಾವಣೆಗೆ ಸಂಬಂಧಿಸಿದಂತೆ (ಚಿಕ್ಕೋಡಿ) ದಾಖಲಾಗಿದ್ದ ಪ್ರಕರಣದಲ್ಲಿ ಏಳನೇ ಅಪರಾಧಿಗೆ ಶಿಕ್ಷೆಯಾಗಿದೆ.
ಅಪರಾಧಿ ಶರೀಫ್ ಉಲ್ಲಾ ಬಾಂಗ್ಲಾದೇಶದ ಗಡಿಭಾಗದಿಂದ ಭಾರತದ ಇತರೆ ಭಾಗಗಳಿಗೆ 41 ನಕಲಿ ನೋಟು ಚಲಾವಣೆ ಮಾಡಲು ಇತರೆ ಆರು ಅಪರಾಧಿಗಳ ಜತೆಗೆ ಸೇರಿಕೊಂಡು ಸಂಚು ರೂಪಿಸಿದ್ದ. ಪಶ್ಚಿಮ ಬಂಗಾಳದಲ್ಲಿ ನಕಲಿ ನೋಟು ಚಲಾವಣೆ ಮಾಡುವ ಉದ್ದೇಶದಿಂದ ಸಂವಹನ ಸಾಧಿಸಲು ನಕಲಿ ದಾಖಲೆ ಸಲ್ಲಿಸಿ ಸಿಮ್ ಕಾರ್ಡ್ ಪಡೆದಿದ್ದ. ಇದು ತನಿಖೆಯ ವೇಳೆ ದೃಢಪಟ್ಟಿತ್ತು ಎಂದು ಎನ್ಐಎ ಹೇಳಿದೆ.
ಭಾರತ ಆರ್ಥಿಕ ವ್ಯವಸ್ಥೆ ಅಸ್ಥಿರತೆಗೊಳಿಸುವ ಪ್ರಯತ್ನ ಮಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಅಲ್ಲದೇ ಆರು ಮಂದಿ ಅಪರಾಧಿಗಳಿಗೆ ನಕಲಿ ನೋಟು ಪೂರೈಸಿದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ವಿರುದ್ದವೂ ತನಿಖೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಇದುವರೆಗೂ ಮೂರು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.