ಬೆಂಗಳೂರು:ಆರ್ಟಿಒ ಸೋಗಿನಲ್ಲಿ ಗೂಡ್ಸ್ ವಾಹನವೊಂದನ್ನು ಅಡ್ಡಗಟ್ಟಿದ್ದ ಅಪರಿಚಿತರು, ಚಾಲಕನನ್ನು ಬೆದರಿಸಿ ವಾಹನವನ್ನು ಕದ್ದೊಯ್ದಿರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
‘ವಾಹನ ಕಳವು ಸಂಬಂಧ ಚಾಲಕ ಮಂಜುನಾಥ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಇದೇ 27ರಂದು ಗೂಡ್ಸ್ ವಾಹನದ ಸಮೇತ ಮಂಜುನಾಥ್ ಕುಂಬಳಗೋಡಿನಲ್ಲಿ ನಿಂತಿದ್ದರು. ಅಲ್ಲಿಗೆ ಬಂದಿದ್ದ ಅಪರಿಚಿತರಿಬ್ಬರು ಮನೆ ಸಾಮಗ್ರಿ ಸಾಗಿಸಬೇಕಿರುವುದಾಗಿ ಹೇಳಿ ಅವರನ್ನು ಕರೆದುಕೊಂಡು ಹೋಗಿದ್ದರು.’
‘ಮಾರ್ಗಮಧ್ಯೆ ವಾಹನವನ್ನು ನಿಲ್ಲಿಸಿದ್ದ ಮತ್ತಿಬ್ಬರು ಆರೋಪಿಗಳು ತಾವು ಆರ್ಟಿಒ ಎಂದು ಹೇಳಿಕೊಂಡಿದ್ದರು. ದಾಖಲೆಗಳು ಸರಿ ಇಲ್ಲವೆಂದು ಹೇಳಿ ವಾಹನ ಜಪ್ತಿ ಮಾಡಿಕೊಂಡು ಸ್ಥಳದಿಂದ ಹೊರಟು ಹೋಗಿದ್ದರು. ಕಂಗಾಲಾದ ಮಂಜುನಾಥ್, ವಾಹನದ ಮಾಲೀಕ ಶ್ರೀನಿವಾಸ್ ಅವರಿಗೆ ವಿಷಯ ತಿಳಿಸಿದ್ದರು.’
‘ದಾಖಲೆ ಸಮೇತ ಶ್ರೀನಿವಾಸ್, ಎಲೆಕ್ಟ್ರಾನಿಕ್ ಸಿಟಿ ಆರ್ಟಿಒ ಕಚೇರಿಗೆ ಹೋಗಿ ವಿಚಾರಿಸಿದ್ದರು. ಯಾವುದೇ ವಾಹನ ಜಪ್ತಿ ಮಾಡಿಲ್ಲವೆಂದು ಅಲ್ಲಿಯ ಅಧಿಕಾರಿಗಳು ಹೇಳಿದ್ದರು. ಅವಾಗಲೇ, ವಾಹನ ಕಳವಾಗಿರುವುದು ಅವರಿಗೆ ಗೊತ್ತಾಗಿತ್ತು. ನಂತರವೇ ಠಾಣೆಗೆ ಬಂದು ದೂರು ನೀಡಿದ್ದಾರೆ. ಘಟನೆ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.