ADVERTISEMENT

ಕಿರುತೆರೆ ನಟಿ ಮಂಜುಳಾ ಕೊಲೆಗೆ ಯತ್ನಿಸಿದ ಪತಿ ಬಂಧನ

ಪೆಪ್ಪರ್ ಸ್ಪ್ರೇ ಬಳಸಿ, ಪತ್ನಿಗೆ ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 16:01 IST
Last Updated 11 ಜುಲೈ 2025, 16:01 IST
ಮಂಜುಳಾ
ಮಂಜುಳಾ   

ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ, ನಿರೂಪಕಿ ಸಿ. ಮಂಜುಳಾ ಅಲಿಯಾಸ್ ಶ್ರುತಿ ಅವರಿಗೆ ಪತಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಹನುಮಂತನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜುಲೈ 4ರಂದು ಮುನೇಶ್ವರ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಜುಳಾ ನೀಡಿದ ದೂರು ಆಧರಿಸಿ ಆರೋಪಿ ಪತಿ ಅಮರೇಶ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಅಮೃತಧಾರೆ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಮಂಜುಳಾ ಅವರು 20 ವರ್ಷಗಳ ಹಿಂದೆ ಅಮರೇಶ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ADVERTISEMENT

ಮಂಜುಳಾ ಕುಟುಂಬ ಹನುಮಂತನಗರದಲ್ಲಿ ಮನೆ ಭೋಗ್ಯಕ್ಕೆ ಪಡೆದು ವಾಸವಿತ್ತು. ಆದರೆ, ಪತ್ನಿಯ ನಡವಳಿಕೆ ಪತಿಗೆ ಇಷ್ಟವಾಗುತ್ತಿರಲಿಲ್ಲ. ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ಹೀಗಾಗಿ, ಪತಿಯಿಂದ ದೂರವಾಗಿ ಅಣ್ಣನ ಮನೆಯಲ್ಲಿ ಮಂಜುಳಾ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭೋಗ್ಯದ ಹಣಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಗೆ ಏಪ್ರಿಲ್ 4ರಂದು ಮಂಜುಳಾ ದೂರು ಕೊಟ್ಟಿದ್ದರು. ಪೊಲೀಸರು ರಾಜಿ - ಸಂಧಾನ ಮಾಡಿಸಿದ್ದರು. ಆದರೆ, ಮತ್ತೆ ಇಬ್ಬರ ಮಧ್ಯೆ ಜಗಳ ನಡೆದಿದೆ.

ಜುಲೈ 4ರಂದು ಮಕ್ಕಳು ಕಾಲೇಜಿಗೆ ತೆರಳಿದ್ದಾರೆ. ಹೊರಗೆ ಹೋಗಿದ್ದ ಪತಿ ಮನೆಗೆ ವಾಪಸ್ ಬಂದಿದ್ದಾರೆ.  ಬಾಗಿಲು ತೆರೆದ ಪತ್ನಿಯ ಮುಖದ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ, ಹಲ್ಲೆ ನಡೆಸಿದ್ದಾರೆ. ಬಳಿಕ ಚಾಕುವಿನಿಂದ ಪಕ್ಕೆಲುಬು, ತೊಡೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದ್ದಾರೆ. ಅಲ್ಲದೇ ಜುಟ್ಟು ಹಿಡಿದು ಗೋಡೆಗೆ ತಲೆ ಗುದ್ದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರ ಅಕ್ಕಪಕ್ಕದವರು ಬಂದು ಜಗಳ ಬಿಡಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಟೊ ಚಾಲಕನಾಗಿರುವ ಅಮರೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಅಮರೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.