ಹೆಸರಘಟ್ಟ: ಲಿಂಗರಾಜಪುರ ಗ್ರಾಮದ ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಪ್ರೊ. ನಂಜುಂಡಪ್ಪ ಸ್ಥಾಪಿತ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಂಜೇಗೌಡ ಮಾತನಾಡಿ, ‘ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಭ್ರಷ್ಟ ಅಧಿಕಾರಿಗಳ ವಿರುದ್ದ ಧ್ವನಿ ಎತ್ತಲು ಬಂದವರನ್ನು ಜೈಲಿಗೆ ಕಳುಹಿಸುವ ನೀಚತನ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
’ಮುಂದಿನ ವಾರ ಮತ್ತೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಯಲಹಂಕ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಯಾವುದೇ ಕಾರಣಕ್ಕೂ ಗೋಮಾಳ ಜಾಗವನ್ನು ಭೂಗಳ್ಳರು ಅನುಭವಿಸಲು ಬಿಡುವುದಿಲ್ಲ‘ ಎಂದರು.
ಯಲಹಂಕದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ‘ಮೈಲಪ್ಪನಹಳ್ಳಿಗ್ರಾಮದ ಸರ್ವೆ ನಂ 21ರಲ್ಲಿ 14 ಎಕರೆ ಸರ್ಕಾರಿ ಜಾಗವಿದೆ. ಇದರಲ್ಲಿ ಐದು ಎಕರೆ ಸರ್ಕಾರಿ ಜಾಗವನ್ನು ನಟರೊಬ್ಬರ ಪತ್ನಿ ಹೆಸರಿಗೆ ನೋಂದಣಿ ಮಾಡಿಕೊಡಲಾಗಿದೆ. ಮತ್ತೆ ಐದು ಎಕರೆ ಜಾಗವು ವಾಣಿ ವಿಶ್ವನಾಥ್ ಅವರ ಹೆಸರಿನಲ್ಲಿ ನೋಂದಣಿಯಾಗಿದೆ. ಸರ್ಕಾರಿ ಜಾಗವನ್ನು ನೋಂದಣಿ ಮಾಡಿಸಿದವರು ಯಾರು. ಈ ಬಗ್ಗೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ಧರಣಿ ನಡೆಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.