ADVERTISEMENT

ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ತಂದೆ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 7:45 IST
Last Updated 22 ಮಾರ್ಚ್ 2020, 7:45 IST
   

ಬೆಂಗಳೂರು: ಊಟ ಮಾಡಿ ಮಲಗಿದ್ದ ಕಂದಮ್ಮಗಳನ್ನು ತಂದೆಯೇ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ ದಾರುಣ ಘಟನೆ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯ ಅಕ್ಷಯನಗರದ ಹನಿ ಡವ್ ಅಪಾರ್ಟ್‌ಮೆಂಟ್‍ ಸಮುಚ್ಚಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ತೌಶಿನಿ (3 ವರ್ಷ) ಮತ್ತು ಒಂದೂವರೆ ವರ್ಷದ ಶಾಸ್ತಾ ಕೊಲೆಯಾದ ಕಂದಮ್ಮಗಳು. ಮೃತ ಮಕ್ಕಳ ತಂದೆ ಜತಿನ್ (35) ಎಂಬಾತನನ್ನು ಬಂಧಿಸಿದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

ಕೇರಳದ ಜತಿನ್‌ ತನಗೆ ರೈಲಿನಲ್ಲಿ ಪರಿಚಯವಾದ ಟೆಕಿ, ತಮಿಳುನಾಡಿನ ಲಕ್ಷ್ಮಿ ಶಂಕರಿ ಎಂಬವರನ್ನು ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದ. ಕೆಲಸ ಇಲ್ಲದೆ ಜತಿನ್‌ ಮನೆಯಲ್ಲೇ ಇರುತ್ತಿದ್ದ. ಈ ವಿಷಯದಲ್ಲಿ ಪತಿ–ಪತ್ನಿ ಮಧ್ಯೆ ನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ ಜತಿನ್‌ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.

ADVERTISEMENT

ಶುಕ್ರವಾರ ರಾತ್ರಿ ಪತ್ನಿ ಮನೆಯಲ್ಲಿ ಇಲ್ಲದೆ ವೇಳೆಯಲ್ಲಿ ಮಂಚದ ಮೇಲೆ ಅಕ್ಕಪಕ್ಕ ಮಲಗಿದ್ದ ಮಕ್ಕಳನ್ನು ಜತಿನ್‌ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪತ್ನಿ ಮನೆಗೆ ಬಂದಾಗ ವಿಷಯ ಗೊತ್ತಾಗಿದ್ದು, ಆಕೆ ತಕ್ಷಣ ಪೊಲೀಸ್ ನಿಯಂತ್ರಣ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಹುಳಿಮಾವು ಠಾಣೆಯ ಪೊಲೀಸರು ಹೋಗಿ ನೋಡಿದಾಗ ಮಕ್ಕಳ ಪೈಕಿ, ಹೆಣ್ಣು ಮಗು ಉಸಿರಾಡುತ್ತಿತ್ತು. ಕೂಡಲೇ ಆ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಿ ಕೊನೆಯುಸಿರೆಳೆದಿತ್ತು.

ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಜತಿನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ‘ಮಕ್ಕಳು ನನ್ನ ರೀತಿಯಲ್ಲಿ ಬೆಳೆಯುತ್ತಿರಲಿಲ್ಲ. ಬದಲಾಗಿ ಅವರ ತಾಯಿಯ ರೀತಿಯಲ್ಲಿ ಬೆಳೆಯುತ್ತಿದ್ದವು. ಆ ಕಾರಣಕ್ಕೆ ಕೊಂದೆ’ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.