ಬೆಂಗಳೂರು: ‘ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಅನಗತ್ಯವಾಗಿ ಗುಲ್ಲೆಬ್ಬಿಸಲಾಗುತ್ತಿದೆ’ ಎಂದು ತಾರೇ ಜಮೀನ್ ಪರ್ ಖ್ಯಾತಿಯ ಟಿಸ್ಕಾ ಚೋಪ್ರಾ ಅಭಿಪ್ರಾಯಪಟ್ಟರು.
ಪುರವಂಕರ ಕಂಪನಿಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ನಾಲೆಡ್ಜ್ ಫ್ಯಾಕ್ಟರಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.
‘ತಂದೆ ಉದ್ಯಮಿಯಾಗಿದ್ದರೆ, ನಾನೂ ಉದ್ಯಮದಲ್ಲಿ ಬೆಳೆಯಲು ಅವರು ಕಂಡಿತಾ ಸಹಾಯ ಮಾಡುತ್ತಾರೆ. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಇದು ಸರ್ವೆಸಾಮಾನ್ಯ. ಅದರಂತೆ ಸ್ನೇಹಿತರು ಮತ್ತು ಸಂಬಂಧಿಕರಿಗೂ ಸಹಾಯ ಮಾಡುವ ಪದ್ಧತಿ ನಮ್ಮಲ್ಲಿದೆ’ ಎಂದರು.
‘ನೀವು ಸಮರ್ಥರಾಗಿದ್ದರೆ, ನಿಮ್ಮ ದಾರಿಯನ್ನು ನೀವೇ ಕಂಡುಕೊಳ್ಳುತ್ತೀರಿ. ಅದಕ್ಕೆ ಯಾರೂ ಅಡ್ಡಿಯಾಗಲಾರರು. ನನ್ನ ಮಗಳು ನಟಿಯಾಗಲು ಬಯಸಿದರೆ ಚಿತ್ರರಂಗದಲ್ಲೇ ಇರುವ ನಾನು ಸಹಾಯ ಮಾಡಬಾರದೇ’ ಎಂದು ಪ್ರಶ್ನಿಸಿದರು.
ಮೀಟೂ ಆಂದೋಲನದ ಕುರಿತ ಪ್ರಶ್ನೆಗೆ, ‘ಚಿತ್ರರಂಗವನ್ನು ತೊರೆಯಬೇಕು ಎಂದು ನನಗೂ ಹಲವಾರು ಬಾರಿ ಅನಿಸಿತ್ತು. ಮೀಟೂ ಆಂದೋಲನ ಮಹತ್ವದ ಬದಲಾವಣೆಗೆ ನಾಂದಿ ಹಾಡಿತು’ ಎಂದು ಶ್ಲಾಘಿಸಿದರು.
‘ಚಿತ್ರರಂಗದಲ್ಲಿ ಖ್ಯಾತಿ ಎಂಬುದು ನೀರಿನ ಮೇಲಿನ ಗುಳ್ಳೆ ಇದ್ದಂತೆ. ಹಾಗಾಗಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿತಿದ್ದೇನೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.