ಬೆಂಗಳೂರು: ಸಿನಿಮಾ ನಿರ್ಮಾಪಕ ರಮೇಶ್ ಕಶ್ಯಪ್ ಮನೆಯಲ್ಲಿ ಕಳವು ಮಾಡಿದ್ದ ಆರೋಪದಡಿ, ಅವರ ಕಾರು ಚಾಲಕ ಚಂದ್ರಶೇಖರ್ (32) ಸೇರಿ ಇಬ್ಬರನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ಕಶ್ಯಪ್ ಮನೆಯಲ್ಲಿ ಜುಲೈ 10ರಂದು ಕಳ್ಳತನ ಆಗಿತ್ತು. ₹ 3 ಲಕ್ಷ ನಗದು ಹಾಗೂ 710 ಗ್ರಾಂ ಚಿನ್ನಾಭರಣ ಕಳವಾಗಿರುವುದಾಗಿ ಕಶ್ಯಪ್ ದೂರು ನೀಡಿದ್ದರು.
‘ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ, ಆರೋಪಿಗಳ ಬಗ್ಗೆ ಸುಳಿವುಗಳು ಸಿಕ್ಕವು. ಅದನ್ನು ಆಧರಿಸಿ ಚಂದ್ರಶೇಖರ್ ಹಾಗೂ ಅಭಿಷೇಕ್ (34) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಕಳ್ಳತನ ಎಸಗಿರುವುದಾಗಿ ಅವರಿಬ್ಬರು ತಪ್ಪೊಪ್ಪಿಕೊಂಡರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕಶ್ಯಪ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್, ಮನೆಯ ನಕಲಿ ಕೀ ಮಾಡಿಸಿಟ್ಟುಕೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ನೇಹಿತ ಅಭಿಷೇಕ್ ಕೈಗೆ ನಕಲಿ ಕೀ ಕೊಟ್ಟು ಕಳ್ಳತನ ಮಾಡಿಸಿದ್ದ. ಕದ್ದ ಆಭರಣಗಳನ್ನು ಅಡವಿಟ್ಟು ಹಣ ಪಡೆದಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಜಪ್ತಿ ಪ್ರಕ್ರಿಯೆ ನಡೆದಿದೆ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.