ಬೆಂಗಳೂರು: ‘ಇ–ಹರಾಜು ಕಾರ್ಯವಿಧಾನದ ಕಾರಣ ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ವ್ಯಾಪಾರದ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸುಮಾರು ₹8 ಸಾವಿರ ಕೋಟಿ ಆದಾಯ ನಷ್ಟವಾಗುತ್ತಿದೆ. ಈ ನಿಬಂಧನೆಗಳನ್ನು ತೆಗೆದುಹಾಕಬೇಕು. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಧ್ಯ ಪ್ರವೇಶಿಸಬೇಕು’ ಎಂದು ಭಾರತೀಯ ಗಣಿ ಉದ್ಯಮಗಳ ಒಕ್ಕೂಟದ (ಫಿಮಿ) ದಕ್ಷಿಣ ವಲಯ ಕೇಂದ್ರ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಫಿಮಿ ದಕ್ಷಿಣ ವಲಯದ ಅಧ್ಯಕ್ಷ ಶಾಂತೇಶ್ ಗುರೆಡ್ಡಿ ‘ರಾಜ್ಯದಲ್ಲಿ ಬಳಕೆಯಾಗದೆ ಉಳಿದಿರುವ ಕಬ್ಬಿಣದ ಅದಿರನ್ನು ಉಂಡೆಗಳಾಗಿ (ಪೆಲೆಟ್ಸ್) ಮಾರ್ಪಡಿಸಿ ರಫ್ತು ಮಾಡುವ ಸ್ವಾತಂತ್ರ್ಯವನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಟನ್ ಅದಿರಿಗೆ ₹11 ಸಾವಿರ ದರ ನಿಗದಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಕೇವಲ ₹4 ಸಾವಿರ ದರ ಇದೆ. ರಾಜ್ಯದಲ್ಲಿ ಅದಿರಿನ ಸಮರ್ಪಕ ಪೂರೈಕೆ ಇದ್ದರೂ ಕೂಡ ಪ್ರತಿ ವರ್ಷ ವಿದೇಶ ಹಾಗೂ ಇತರ ರಾಜ್ಯಗಳಿಂದ ನಿಯಮಿತವಾಗಿ ಅದಿರು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸಮತೋಲನ ತಗ್ಗಿದ್ದು ಅದಿರು ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.
‘ನಿರ್ಬಂಧಗಳಿಂದಾಗಿ ಅದಿರು ಉದ್ಯಮದ ಹೂಡಿಕೆಗೂ ಪೆಟ್ಟು ಬಿದ್ದಿದೆ. ಅನೇಕ ಕಂಪನಿಗಳು ರಾಜ್ಯದಿಂದ ಹೊರಹೋಗುವ ಅಪಾಯವೂ ಇದೆ. ಹಾಗೇನಾದರು ಆದರೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಲಿದೆ’ ಎಂದು ತಿಳಿಸಿದರು.
ಫಿಮಿ ದಕ್ಷಿಣ ವಲಯದ ಸದಸ್ಯರಾದ ಸೌಮಿಕ್ ಮಜುಂದಾರ್, ರಾಹುಲ್ ಹಾಗೂ ಬಸಂತ್ ಪೊದ್ದಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.