ವಂಚನೆ–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಮಾರತ್ಹಳ್ಳಿಯ ಹೊರವರ್ತುಲ ರಸ್ತೆಯಲ್ಲಿರುವ ಫೈನಾನ್ಸ್ ಕಂಪನಿಯೊಂದರ ಖಾತೆಗೆ ಕನ್ನ ಹಾಕಿದ್ದ ವಂಚಕರು ₹47 ಕೋಟಿ ವರ್ಗಾವಣೆ ಮಾಡಿಕೊಂಡಿದ್ದಾರೆ. ವಿಝೆಡ್ಎಂ ಫೈನಾನ್ಸ್ ಕಂಪನಿಯ ಹಿರಿಯ ವ್ಯವಸ್ಥಾಪಕ ಎಂ.ಪ್ರಕಾಶ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಕಂಪನಿಯ ಅನುಮತಿಯಿಲ್ಲದೇ ಕೆಲವು ಖಾತೆಗಳಿಗೆ ಆಗಸ್ಟ್ 6 ಮತ್ತು 7ರಂದು ಅನುಮಾನಾಸ್ಪದವಾಗಿ ಹಣ ವರ್ಗಾವಣೆ ಆಗಿದೆ. ಆಗಸ್ಟ್ 7ರಂದು ಸಂಜೆ ಹಣ ವರ್ಗಾವಣೆ ಆಗಿರುವುದು ಗಮನಕ್ಕೆ ಬಂದಿತ್ತು ಎಂದು ದೂರಿನಲ್ಲಿ ಪ್ರಕಾಶ್ ಅವರು ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಸಿಬಿಯ ಸೈಬರ್ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
‘ಹಣವು ಅನಿಯಮಿತ ಹಾಗೂ ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿದ್ದು ಗೊತ್ತಾದ ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಹಣ ಡ್ರಾ ಆಗದಂತೆ ಬ್ಯಾಂಕ್ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.
ಕಂಪನಿಯ ಸಿಬ್ಬಂದಿ ಹಣವನ್ನು ವರ್ಗಾವಣೆ ಮಾಡಿಲ್ಲ ಎಂಬುದು ಆಂತರಿಕ ತನಿಖೆಯಿಂದ ಗೊತ್ತಾಗಿದೆ. ಐಪಿ ವಿಳಾಸವು ವಿದೇಶದ್ದು ಎಂಬುದು ಕಂಡುಬಂದಿದೆ. ಆಂತರಿಕ ತನಿಖೆಯಿಂದ ₹47 ಕೋಟಿ ಕಾನೂನು ಬಾಹಿರವಾಗಿ ವರ್ಗಾವಣೆಯಾಗಿದೆ ಎಂದು ವ್ಯವಸ್ಥಾಪಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಸೈಬರ್ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.