ಶಾಸಕ ಮುನಿರತ್ನ
ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ತಮ್ಮ ಕ್ಷೇತ್ರದವರಿಗೆ ದೀಪಾವಳಿ ಹಬ್ಬಕ್ಕೆ ಪಟಾಕಿ ಹಂಚಲು ದಾಸ್ತಾನು ಮಾಡಿಕೊಂಡಿದ್ದಾರೆ ಎಂಬ ದೂರು ಬಂದ ಬೆನ್ನಲ್ಲೇ ಶುಕ್ರವಾರ ಮಧ್ಯಾಹ್ನ ಅವರ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದರು.
ಈ ವೇಳೆ ಮುನಿರತ್ನ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಬಳಿಕ ಮುನಿರತ್ನ ಅವರು ಮಾತನಾಡಿ, ‘ನನ್ನ ಕಚೇರಿಯಲ್ಲಿ ಪಟಾಕಿ ದಾಸ್ತಾನು ಮಾಡಿದ್ದಾರೆ ಎಂದು ಕುಸುಮಾ ಕಡೆಯವರು ದೂರು ಕೊಟ್ಟಿದ್ದಾರೆ. ಪೊಲೀಸರು ಕರೆ ಮಾಡಿ ಕಚೇರಿಯ ಬೀಗ ತೆಗೆಯುವಂತೆ ಕೋರಿದ್ದರು. ದೀಪಾವಳಿ ಸಂದರ್ಭದಲ್ಲಿ ನಾನೊಬ್ಬನೇ ಅಲ್ಲ. ಹಲವರು ಪಟಾಕಿ ಬಾಕ್ಸ್ ಹಂಚುತ್ತಾರೆ. ಬೇರೆಲ್ಲೂ ಇಲ್ಲದ ನಿಯಮ ನನಗೆ ಮಾತ್ರ ಏಕೆ’ ಎಂದು ಪ್ರಶ್ನಿಸಿದರು.
‘ಗಾರ್ಮೆಂಟ್ಸ್ ಹಾಗೂ ಮದುವೆ ಛತ್ರದಲ್ಲಿ ಕೆಲಸ ಮಾಡುವವರು ಪಟಾಕಿ ಕೊಡಿಸುವಂತೆ ಮನವಿ ಮಾಡಿದ್ದರು. ಪ್ರತಿವರ್ಷದ ಸಂಕ್ರಾಂತಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ಕಿಟ್ ಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೂ ನೋಟ್ಬುಕ್ ವಿತರಣೆ ಮಾಡುತ್ತಿದ್ದೇವೆ. ಆದರೆ, ಈ ವರ್ಷ ಪಟಾಕಿ ಕೊಡದಂತೆ ಪೊಲೀಸರ ದಂಡೇ ಬಂದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.