ADVERTISEMENT

ರೈತರ ಅಭಿವೃದ್ಧಿಗೆ ಮೊದಲ ಆದ್ಯತೆ: ಶಾಸಕ ಪಿ. ರಾಜೀವ್

ಬಿಜೆಪಿಯ ರಾಜ್ಯಮಟ್ಟದ ಇ–ಚಿಂತನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 6:41 IST
Last Updated 30 ಜುಲೈ 2021, 6:41 IST
ಶಾಸಕ ಪಿ.ರಾಜೀವ್‌ ಮಾತನಾಡಿದರು
ಶಾಸಕ ಪಿ.ರಾಜೀವ್‌ ಮಾತನಾಡಿದರು   

ಬೆಂಗಳೂರು: ‘ರೈತರ ಕಲ್ಯಾಣವೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಥಮ ಆದ್ಯತೆ. ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರ ಸ್ವಾಭಿಮಾನ ಹೆಚ್ಚಿಸಿದೆ’ ಎಂದು ಕುಡುಚಿಯ ಬಿಜೆಪಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.

ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ಗುರುವಾರ ರಾಜ್ಯಮಟ್ಟದ ಇ–ಚಿಂತನ ವರ್ಗದಲ್ಲಿ ಬಡವರ ಕಲ್ಯಾಣಕ್ಕಾಗಿ ಸಂಕಲ್ಪ ಮತ್ತು ಆ ದಿಸೆಯಲ್ಲಿ ನಮ್ಮ ಪ್ರಯತ್ನಗಳು ವಿಷಯದ ಕುರಿತು ಅವರು ಮಾತನಾಡಿದರು.

‘ಕೇವಲ ದಲ್ಲಾಳಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದ್ದ ಕೃಷಿ ಮಾರುಕಟ್ಟೆ ಗಳ ಸಂಕೋಲೆ ಬಿಡುಗಡೆಯಾಗಿದೆ. ದೇಶದ ಯಾವುದೇ ಮೂಲೆಯಲ್ಲೂ ಹೆಚ್ಚು ಬೆಲೆ ಕೊಡುವ ವ್ಯಾಪಾರಿಗೆ ಉತ್ಪನ್ನ ಮಾರಾಟ ಮಾಡುವ ಸ್ವಾತಂತ್ರ್ಯ ರೈತರಿಗೆ ಸಿಕ್ಕಿದೆ’ ಎಂದು ರಾಜೀವ್‌ ಹೇಳಿದರು.

ADVERTISEMENT

‘ಫಸಲ್‌ ಬಿಮಾ ಯೋಜನೆಯಡಿ 9.42 ಕೋಟಿಗೂ ಹೆಚ್ಚು ರೈತರಿಗೆ ಸೌಲಭ್ಯ ಲಭಿಸುತ್ತಿದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ ಇ–ನಾಮ್‌ ಅಡಿಯಲ್ಲಿ ಇಲ್ಲಿಯವರೆಗೆ 1.70 ಕೋಟಿಗೂ ಹೆಚ್ಚು ರೈತರು ನೋಂದಾವಣೆಗೊಂಡಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ 66 ಲಕ್ಷ ಹೆಕ್ಟೇರ್‌ ಭೂಮಿಗೆ ಹನಿ ನೀರಾವರಿ ಸೌಲಭ್ಯ ನೀಡಲಾಗಿದೆ’ ಎಂದು ಹೇಳಿದರು.

‘ಮಣ್ಣು ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಿದ ಮೊದಲ ಕೇಂದ್ರ ಸರ್ಕಾರ ನಮ್ಮದು. 11.94 ಕೋಟಿ ರೈತರಿಗೆ ಸಾಯಿಲ್ ಹೆಲ್ತ್‌ ಕಾರ್ಡ್‌ ವಿತರಿಸಲಾಗಿದೆ. ಸಣ್ಣ ಹಿಡುವಳಿದಾರರು ಸಾಲದ ಸುಳಿಯಲ್ಲಿ ಸಿಲುಕಬಾರದು ಎಂಬ ದೃಷ್ಟಿಯಿಂದ ಕೃಷಿ ಸಮ್ಮಾನ್‌ ಯೋಜನೆ ಜಾರಿಗೊಳಿಸಿದ್ದು, ವಾರ್ಷಿಕ ಒಟ್ಟು ₹6,000 ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ₹4,000ವನ್ನು ರಾಜ್ಯ ನೀಡುತ್ತಿದೆ. ಇದರಿಂದ ಒಟ್ಟು ₹10 ಸಾವಿರ ರೈತರಿಗೆ ಸಿಗುತ್ತಿದೆ. ಬಿಜೆಪಿ ಸರ್ಕಾರಗಳು ಬಡವರು, ಶೋಷಿತರ ಮತ್ತು ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಅವರು ಹೇಳಿದರು.

‘ದೇಶದ ಕಟ್ಟಕಡೆಯ ವ್ಯಕ್ತಿಯೂ ಸೇರಬಹುದಾದ ಅಟಲ್‌ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೊಳಿಸಿದ್ದು, ವಾರ್ಷಿಕ ವಾಗಿ ₹ 21ರಿಂದ ಪ್ರೀಮಿಯಂಆರಂಭವಾಗುತ್ತಿದೆ. ವಾರ್ಷಿಕ ₹ 2 ಲಕ್ಷದಿಂದ ₹ 5 ಲಕ್ಷದವರೆಗೆ ಪ್ರಯೋಜನ ಲಭಿಸುತ್ತಿದೆ’ ಎಂದು ರಾಜೀವ್ ವಿವರಿಸಿದರು.

ಸಿದ್ದರಾಮಯ್ಯ ಹೇಳಿಕೆ ಕ್ಷುಲ್ಲಕ: ಕಾರ್ಣಿಕ್

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಲಂಗು ಲಗಾಮಿಲ್ಲದೇ ಕೀಳು ಮಟ್ಟದ ಮತ್ತು ಕ್ಷುಲ್ಲಕ ಹೇಳಿಕೆಗಳ ಮೂಲಕ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್‌ ಹೇಳಿದ್ದಾರೆ.

ಕಾಂಗ್ರೆಸ್‌ನ ಮಹಾನಾಯಕ ಮತ್ತು ಮೀರ್‌ ಸಾದಕ್‌ರ ದೆಹಲಿ ಭೇಟಿ ವಿಫಲವಾಗಿದ್ದು, ಅಧಿನಾಯಕಿಯಿಂದ ತೀವ್ರ ಖಂಡನೆಗೆ ಒಳಗಾಗಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆಯಿಂದ ಹತಾಶರಾಗಿದ್ದಾರೆ. ಹೀಗಾಗಿ ಅಸಂಬದ್ಧ ಹೇಳಿಕೆಗಳನ್ನು ಮುಂದುವರಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ತಮ್ಮ ಹಿಂಬಾಲಕರ ಮೂಲಕ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸಿಕೊಂಡ ಸಿದ್ದರಾಮಯ್ಯ ಅವರು ಈಗ ಹೈಕಮಾಂಡ್‌ನಿಂದ ಛೀಮಾರಿಗೆ ಒಳಗಾಗಿದ್ದಾರೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.